
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯಲ್ಲಿ ಮಳೆಯಿಂದ ಉಂಟಾದ ಹಾನಿ ಪ್ರದೇಶಕ್ಕೆ ಮಾಜಿ ಶಾಸಕ ಸೋಮಲಿಂಗಪ್ಪ ಭೇಟಿ ನೀಡಿ, ಪರಿಶೀಲಿಸಿದರು
ಹುಬ್ಬಳ್ಳಿ: ಉತ್ತರ ಕನ್ನಡ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಶನಿವಾರ ವ್ಯಾಪಕ ಮಳೆ ಸುರಿದಿದ್ದು, ಅಂಕೋಲಾ ತಾಲ್ಲೂಕಿನ ಹಾರವಾಡದಲ್ಲಿ ರಾಜ್ಯದಲ್ಲೇ ಗರಿಷ್ಠ 8 ಸೆಂ.ಮೀ ಮಳೆ ಸುರಿಯಿತು.
ಮಳೆ ಹಿನ್ನೆಲೆಯಲ್ಲಿ ಕಾರವಾರ ತಾಲ್ಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಕಾರವಾರ–ಕೈಗಾ ರಾಜ್ಯ ಹೆದ್ದಾರಿ ಭಾಗಶಃ ಜಲಾವೃತಗೊಂಡಿತ್ತು.
ಬಿರುಸಿನ ಗಾಳಿ ಇದ್ದ ಪರಿಣಾಮ ವಾಣಿಜ್ಯ ಮತ್ತು ಮೀನುಗಾರಿಕೆ ಬಂದರಿಗೆ ಇನ್ನಷ್ಟು ಮೀನುಗಾರಿಕೆ ದೋಣಿಗಳು ತಡರಾತ್ರಿಯಿಂದಲೂ ಬಂದು ಲಂಗರು ಹಾಕಿದವು.
ಕಾರವಾರ ನಗರದ ಹಬ್ಬುವಾಡಾ ಬಳಿ ಕಾರವಾರ–ಕೈಗಾ ಹೆದ್ದಾರಿ ಜಲಾವೃತವಾಗಿತ್ತು
ವಿಜಯನಗರ ಜಿಲ್ಲೆಯಲ್ಲಿ ಮಳೆ ಹಾಗೂ ತೇವಾಂಶದಿಂದಾಗಿ ಅಪಾರ ಪ್ರಮಾಣದ ಮೆಕ್ಕೆಜೋಳ ರಾಶಿಯಲ್ಲೇ ಮೊಳಕೆಯೊಡೆದಿದೆ.
ಹೂವಿನಹಡಗಲಿ ಪಟ್ಟಣ ಸುತ್ತಮುತ್ತಲ ಗ್ರಾಮಗಳ ರೈತರು ಸಾವಿರಾರು ಕ್ವಿಂಟಲ್ನಷ್ಟು ಮೆಕ್ಕೆಜೋಳವನ್ನು ಎಪಿಎಂಸಿ ಪ್ರಾಂಗಣದಲ್ಲೇ ಒಣಗಿಸಿ ಮಾರಾಟ ಮಾಡಲು ತಂದಿದ್ದಾರೆ. ತಾಡಪಾಲು ಮುಚ್ಚಿದ್ದರೂ ಮಳೆಗೆ ಸಿಲುಕಿ ಮೆಕ್ಕೆಜೋಳ ಮೊಳಕೆಯೊಡೆದೆ. ನಾಲ್ಕೈದು ದಿನಗಳಿಂದ ಬಿಸಿಲಿಲ್ಲದೆ ಕೂಡ್ಲಿಗಿ ತಾಲ್ಲೂಕಿನಲ್ಲಿ ಸಹ ಇದೇ ಸಮಸ್ಯೆ ಎದುರಾಗಿದೆ.
ಮೆಕ್ಕೆಜೋಳ ಖರೀದಿಗೆ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಖರೀದಿ ಕೇಂದ್ರ ತೆರೆದು, ಕ್ವಿಂಟಲ್ಗೆ ₹2400ರ ಬೆಂಬಲ ಬೆಲೆಯಲ್ಲಿ ಖರೀದಿಸಲಿ ಎಂದು ಆಗ್ರಹಿಸಿದ್ದಾರೆ.
ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 26,815 ಕ್ಯೂಸೆಕ್ಗೆ ಏರಿದ್ದು, ಜಲಾಶಯದಿಂದ 14,950 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಬಳ್ಳಾರಿ ಜಿಲ್ಲೆಯಲ್ಲಿ 18 ಮನೆಗಳಿಗೆ ಹಾನಿಯಾಗಿದೆ. ಕಂಪ್ಲಿ, ಸಿರುಗುಪ್ಪ ತಾಲ್ಲೂಕುಗಳಲ್ಲಿ ಭತ್ತದ ಬೆಳೆ ಹಾನಿಗೀಡಾಗಿದೆ.
ಸಿರುಗುಪ್ಪ ತಾಲ್ಲೂಕಿನಲ್ಲಿ ಮಳೆಯಿಂದಾಗಿ ಭತ್ತ ಕಟಾವು, ಒಕ್ಕಣೆಗೆ ಅಡಚಣೆಯಾಗಿದೆ. ಹಲವು ಕಡೆ ಒಕ್ಕಣೆ ಮಾಡಿದ್ದ ಮೆಕ್ಕೆಜೋಳ ಹಾಳಾಗಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರು ಮಳೆಯಿಂದಾಗಿ ಮತ್ತಷ್ಟು ಸಮಸ್ಯೆಗೆ ಗುರಿಯಾಗಿದ್ದಾರೆ.
ಬೆಳೆ ಹಾನಿ ಕುರಿತು ಜಿಲ್ಲಾಡಳಿತ ಜಂಟಿ ಸಮೀಕ್ಷೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.