ಬೆಂಗಳೂರು: ಆಸ್ತಿ ನೋಂದಣಿಗೆ ಸರ್ಕಾರ ನಿಗದಿಪಡಿಸಿರುವ ನಿರ್ದಿಷ್ಟ ಮುದ್ರಾಂಕ ಶುಲ್ಕಕ್ಕಿಂತ ಕಡಿಮೆ ಪಡೆದ ಪ್ರಕರಣಗಳಲ್ಲಿ ಒಂಬತ್ತು ಅಧಿಕಾರಿ ಗಳನ್ನು ಅಮಾನತು ಮಾಡಲಾಗಿದೆ. ಬೆಳಗಾವಿಯ ಅಧಿಕಾರಿಯೊಬ್ಬರನ್ನು ಶೀಘ್ರವೇ ಅಮಾನತು ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
‘ರಾಜ್ಯದಾದ್ಯಂತ ಮುದ್ರಾಂಕ ಶುಲ್ಕ ಕಡಿಮೆ ಪಡೆದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಇದೇ ರೀತಿ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಇದಕ್ಕೆ ಶೀಘ್ರವೇ ಪ್ರತ್ಯೇಕ ನಿಯಮ ಜಾರಿಗೆ ತರುವ ಚಿಂತನೆ ಇದೆ. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧಿಕಾರಿಗಳಿಂದಲೇ ತುಂಬಿಸಿಕೊಳ್ಳುವ ಬಗ್ಗೆಯೂ ಚಿಂತನೆಯಿದೆ’ ಎಂದರು.
ಮುದ್ರಾಂಕ ಶುಲ್ಕ ನಷ್ಟವಾಗುತ್ತಿರುವ ಬಗ್ಗೆ ವಿಧಾನ ಪರಿಷತ್ನಲ್ಲಿ ಪ್ರಶ್ನೆ ಕೇಳಿದ ಬಿಜೆಪಿಯ ಎನ್. ರವಿಕುಮಾರ್, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅನುಮೋದಿಸಿರುವ ಮಾಗಡಿ ರಸ್ತೆಯ ಕಾವೇರಿಪುರ, ಮಾರುತಿ ನಗರ, ಮೀನಾಕ್ಷಿ ನಗರ, ರಂಗನಾಥಪುರ ಮತ್ತು ಸಣ್ಣಕ್ಕಿ ಬಯಲು ಪ್ರದೇಶಗಳ 337 ಮಾರಾಟ ಪತ್ರಗಳ ನೋಂದಣಿಯಿಂದ ₹ 103.39 ಕೋಟಿ ನಷ್ಟವಾಗಿದೆ. ಬೆಳಗಾವಿ ವಿಭಾಗದಲ್ಲೂ ಇದೇ ರೀತಿಯ ಪ್ರಕರಣ ನಡೆದಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.