ಬೆಂಗಳೂರು: ಪೋಷಕರನ್ನು ಕಳೆದುಕೊಂಡು, ಎರಡನೇ ತರಗತಿಗೆ ಶಾಲೆ ತೊರೆದಿದ್ದ ಶಿವಕುಮಾರ್, ಸುದೀಪ್ ಸಹೋದರರು ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಈ ಇಬ್ಬರು ಸಹೋದರರು ಶಾಲೆಬಿಟ್ಟು ಕೂಲಿ ಕೆಲಸ ಮಾಡಿಕೊಂಡಿದ್ದರು. ಶಾಲೆಬಿಟ್ಟ ಮಕ್ಕಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿದ್ದ ಸ್ಪರ್ಶ ಟ್ರಸ್ಟ್ 2019ರಲ್ಲಿ ಅವರನ್ನು ಪತ್ತೆ ಮಾಡಿತ್ತು. ಒಂದು ವರ್ಷ ಸೇತುಬಂಧ ಶಿಕ್ಷಣ ಕೊಡಿಸಿ, ನಂತರ ವಯಸ್ಸಿನ ಆಧಾರದಲ್ಲಿ ನೇರವಾಗಿ 8ನೇ ತರಗತಿಗೆ ಪ್ರವೇಶ ಕೊಡಿಸಿತ್ತು.
ಹೆಸರಘಟ್ಟದ ಸರ್ಕಾರಿ ಪ್ರೌಢಶಾಲೆಗೆ ನೇರ ಪ್ರವೇಶ ಪಡೆದಿದ್ದ ಮಕ್ಕಳು ಈಗ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಶಿವಕುಮಾರ್ 625ಕ್ಕೆ 561, ಸುದೀಪ್ 450 ಅಂಕ ಪಡೆದಿದ್ದಾರೆ.
’ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಶಾಲೆ ಬಿಟ್ಟಿದ್ದ ನಮಗೆ 8ನೇ ತರಗತಿಗೆ ಸೇರಿಸಿದಾಗ ಓದುತ್ತೇವೆ ಎನ್ನುವ ಆತ್ಮವಿಶ್ವಾಸವಿರಲಿಲ್ಲ. ಆದರೆ, ಶಾಲೆಯ ಶಿಕ್ಷಕರು ಹಾಗೂ ಸ್ಪರ್ಶ ಟ್ರಸ್ಟ್ ಎಲ್ಲ ನೆರವು ನೀಡಿ, ಕಲಿಕೆಗೆ ಉತ್ತೇಜಿಸಿದರು. ಇದರಿಂದ ಕಷ್ಟಪಟ್ಟು ಓದಿದೆವು. ಅವರ ಸಹಾಯ ಎಂದಿಗೂ ಮರೆಯುವುದಿಲ್ಲ‘ ಎಂದು ಶಿವಕುಮಾರ್ ’ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.
ಶಿವಕುಮಾರ್ ಪಿಯುಸಿನಲ್ಲಿ ಕಲಾ ವಿಷಯ ಆಯ್ಕೆಮಾಡಿಕೊಂಡು ನಾಗರಿಕ ಸೇವಾ ಪರೀಕ್ಷೆ ಎದುರಿಸುವ, ಸುದೀಪ್ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆಯಲು ನಿರ್ಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.