
ರಘುನಾಥ ಚ.ಹ ಹಾಗೂ ಪ್ರಕಾಶರಾಜ್ ಮೇಹು
ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ 2020ನೇ ಸಾಲಿನ ಚಲನಚಿತ್ರ ಸಾಹಿತ್ಯ ಪ್ರಶಸ್ತಿಗೆ ಪ್ರಜಾವಾಣಿಯ ‘ಅಭಿಮತ’ದ ಸಂಪಾದಕ ರಘುನಾಥ ಚ.ಹ. ಅವರು 20 ಸಿನಿಮಾಗಳ ಕುರಿತ ಬರೆದ ಲೇಖನಗಳ ಸಂಗ್ರಹ ‘ನಮೋ ವೆಂಕಟೇಶ’ ಕೃತಿ ಆಯ್ಕೆಯಾಗಿದೆ.
ಬಳ್ಳಾರಿ ಜಿಲ್ಲೆ ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ಎಂ.ನಿಂಬಾಳ್ಕರ, ಪತ್ರಕರ್ತರಾದ ರಾಜಶೇಖರ ಹತಗುಂದಿ ಹಾಗೂ ಬಸವರಾಜ ಮೇಗಲಕೇರಿ ಅವರನ್ನು ಒಳಗೊಂಡ ಸಮಿತಿ ಈ ಕೃತಿಯನ್ನು ಆಯ್ಕೆ ಮಾಡಿದೆ.
2021ನೇ ಸಾಲಿನ ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿಗೆ ಬೆಂಗಳೂರಿನ ಸಿರಿಗಂಧ ಪ್ರಕಾಶನ ಪ್ರಕಟಿಸಿರುವ ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಅವರ ಡಾ.ರಾಜ್ಕುಮಾರ್ ಬದುಕಿನ ಕುರಿತ ‘ಅಂತರಂಗದ ಅಣ್ಣ’ ಕೃತಿ ಆಯ್ಕೆಯಾಗಿದೆ. ಸಾಹಿತಿ ಚಿದಾನಂದ ಸಾಲಿ ಹಾಗೂ ಪತ್ರಕರ್ತ ಶರಣು ಹುಲ್ಲೂರು ಅವರು ಆಯ್ಕೆ ಸಮಿತಿ ಸದಸ್ಯರಾಗಿದ್ದರು.
ಲೇಖಕರು, ಪ್ರಕಾಶಕರಿಗೆ ತಲಾ ₹20 ಸಾವಿರ ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕದೊಂದಿಗೆ ಸದ್ಯದಲ್ಲೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಎಂದು ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ತಿಳಿಸಿದ್ದಾರೆ.
ರಘುನಾಥ, ಇಂದೂಧರ, ಸಂಘಮಿತ್ರೆಗೆ ಪ್ರಶಸ್ತಿ
ಕನ್ನಡ ಸಂಘರ್ಷ ಸಮಿತಿ ನೀಡುವ 2026ನೇ ಸಾಲಿನ ‘ಕುವೆಂಪು ಚಿರಂತನ ಪ್ರಶಸ್ತಿ’ಗೆ ಪ್ರಜಾವಾಣಿಯ ‘ಅಭಿಮತ’ದ ಸಂಪಾದಕ ರಘುನಾಥ ಚ.ಹ., ಕುವೆಂಪು ಅನಿಕೇತನ ಪ್ರಶಸ್ತಿಗೆ ಪತ್ರಕರ್ತ ಇಂದೂಧರ ಹೊನ್ನಾಪುರ ಹಾಗೂ ಕುವೆಂಪು ಯುವಕವಿ ಪ್ರಶಸ್ತಿಗೆ ಯುವ ಕವಯತ್ರಿ ಸಂಘಮಿತ್ರೆ ನಾಗರಘಟ್ಟ ಭಾಜನರಾಗಿದ್ದಾರೆ.
ಕುವೆಂಪು ಚಿರಂತನ ಪ್ರಶಸ್ತಿಯು ₹10 ಸಾವಿರ ನಗದು, ಕುವೆಂಪು ಅನಿಕೇತನ ಪ್ರಶಸ್ತಿಯು ₹5 ಸಾವಿರ ನಗದು ಪುರಸ್ಕಾರ, ಯುವಕವಿ ಪ್ರಶಸ್ತಿಯು ₹2 ಸಾವಿರ ನಗದು ಪುರಸ್ಕಾರ ಫಲಕ ಹಾಗೂ ಅಭಿನಂದನಾ ಪತ್ರ ಒಳಗೊಂಡಿದೆ.
ಜ.18ರಂದು ಬೆಳಿಗ್ಗೆ 10ಕ್ಕೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಯೋಜಿಸಿರುವ ಕುವೆಂಪು ಹಾಗೂ ಬೇಂದ್ರೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜ ಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.