ADVERTISEMENT

ಅಸಮಾಧಾನ ತಣಿಸಲು ಯತ್ನ: ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:36 IST
Last Updated 7 ಆಗಸ್ಟ್ 2021, 22:36 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಸಚಿವ ಸ್ಥಾನ ಸಿಗದಿರುವುದು ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಎಲ್ಲರ ಜತೆಗೂ ಚರ್ಚಿಸಿ ಮನವೊಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಶನಿವಾರ ತಿಳಿಸಿದರು.

ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿದ ಬಳಿಕ ಮಾತನಾಡಿದ ಅವರು, ಸಚಿವ ಆನಂದ್‌ ಸಿಂಗ್‌, ಶಾಸಕರಾದ ಪ್ರೀತಂ ಗೌಡ ಮತ್ತು ಅರವಿಂದ ಬೆಲ್ಲದ ಅವರು ಅಸಮಾಧಾನ ಹೊರಹಾಕಿರುವ ಕುರಿತು ಪ್ರತಿಕ್ರಿಯಿಸಿದರು.

‘ಬದಲಾವಣೆ ತರುವ ಉದ್ದೇಶದಿಂದ ಹೊಸಬರಿಗೆ ಪ್ರಮುಖ ಖಾತೆ ನೀಡಲಾಗಿದೆ. ನಾನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮನೆಗೆ ಭೇಟಿ ನೀಡಿದ್ದ ಕಾರಣಕ್ಕಾಗಿ ಪ್ರೀತಂ ಗೌಡ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ಆರೋಪಿಸುವುದು ಸರಿಯಲ್ಲ. ಅಸಮಾಧಾನ ವ್ಯಕ್ತಪಡಿಸಿರುವ ಎಲ್ಲರೂ ನನ್ನ ಆತ್ಮೀಯರು. ಅವರ ಜತೆ ಮಾತನಾಡುತ್ತೇನೆ’ ಎಂದರು.

ADVERTISEMENT

ತಮಗೂ ಹಿಂದೆ ಬೇರೆ ಪಕ್ಷದಲ್ಲಿ ಇದ್ದ ಅನುಭವ ಇದೆ. ಅಲ್ಲಿ ಸ್ವಾರ್ಥ ರಾಜಕಾರಣ ಮಾತ್ರ ಕಾಣುತ್ತಿತ್ತು. ಬಿಜೆಪಿಯಲ್ಲಿ ಅಂತಹ ವಾತಾವರಣ ಇಲ್ಲ ಎಂದು ಹೇಳಿದರು.

ಜನರ ಸಹಕಾರ ಅಗತ್ಯ: ಕೋವಿಡ್‌ ಸೋಂಕು ಹೆಚ್ಚಳವಾದರೆ ಲಾಕ್‌ಡೌನ್‌ ಮಾಡುವ ಅನಿವಾರ್ಯ ಎದುರಾಗುತ್ತದೆ. ಅದನ್ನು ತಪ್ಪಿಸಲು ಕೆಲ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜನರು ಸಹಕರಿಸಬೇಕು ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.