ADVERTISEMENT

ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಅವಧಿ ವಿಸ್ತರಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 16:09 IST
Last Updated 16 ಡಿಸೆಂಬರ್ 2025, 16:09 IST
ಛಲವಾದಿ ನಾರಾಯಣ ಸ್ವಾಮಿ
ಛಲವಾದಿ ನಾರಾಯಣ ಸ್ವಾಮಿ   

ಸುವರ್ಣ ವಿಧಾನಸೌಧ (ಬೆಳಗಾವಿ): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಒಂದು ವಾರ ವಿಸ್ತರಿಸಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಮಂಗಳವಾರದ ಕಲಾಪದ ವೇಳೆ ನಾರಾಯಣಸ್ವಾಮಿ, ‘ಅಧಿವೇಶನ ಇನ್ನು ನಾಲ್ಕು ದಿನ ಮಾತ್ರವೇ ಇದೆ. ಪ್ರಶ್ನೋತ್ತರ, ಮಸೂದೆಗಳ ಮೇಲಿನ ಚರ್ಚೆ ನಡೆಯಬೇಕಿದೆ. ಇದರಿಂದಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಅಗತ್ಯದಷ್ಟು ಸಮಯ ಸಿಗುವುದಿಲ್ಲ. ಹೀಗಾಗಿ ಅಧಿವೇಶನವನ್ನು ಇನ್ನೂ ಒಂದು ವಾರ ವಿಸ್ತರಿಸಬೇಕು ನಿಮ್ಮ ಮೂಲಕ ಸರ್ಕಾರವನ್ನು ಕೋರುತ್ತೇನೆ’ ಎಂದು ಮನವಿ ಸಲ್ಲಿಸಿದರು.

ಸಭಾನಾಯಕ ಎಸ್‌.ಎನ್‌.ಬೋಸರಾಜು, ‘ಬೇರೆಲ್ಲಾ ವಿಷಯಗಳನ್ನು ಕೈಬಿಡಿ, ಉತ್ತರ ಕರ್ನಾಟಕದ ವಿಷಯಗಳನ್ನೇ ಚರ್ಚಿಸೋಣ’ ಎಂದು ನಾರಾಯಣಸ್ವಾಮಿ ಅವರ ಕಾಲೆಳೆದರು. ನಾರಾಯಣಸ್ವಾಮಿ, ‘ಮಸೂದೆ ಮಂಡನೆ, ಚರ್ಚೆಯನ್ನು ಕೈಬಿಡಿ’ ಎಂದು ತಿರುಗೇಟು ನೀಡಿದರು.

ADVERTISEMENT

ಆಗ ಸಭಾಪತಿ ಬಸವರಾಜ ಹೊರಟ್ಟಿ ಅವರು, ‘ಸದಸ್ಯರು ಪ್ರಶ್ನೋತ್ತರ ಅವಧಿಯಲ್ಲಿ ಅನಗತ್ಯವಾಗಿ ಮಾತನಾಡುವುದರಿಂದ ಸಮಯ ವ್ಯರ್ಥವಾಗುತ್ತಿದೆ. ಅದನ್ನು ನಿಲ್ಲಿಸಿದರೆ, ಇರುವ ಸಮಯದಲ್ಲಿಯೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಬಹುದು’ ಎಂದರು. ಜತೆಗೆ, ‘ಇನ್ನಷ್ಟು ಸಮಯ ಬೇಕು ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿ ಅವರ ಜತೆ ಮಾತನಾಡಿ. ನಾನೂ ಮಾತನಾಡುತ್ತೇನೆ’ ಎಂದು ಸಭಾನಾಯಕ ಬೋಸರಾಜು ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.