ADVERTISEMENT

ಗಡಿ ವಿಚಾರದಲ್ಲಿ ಕರ್ನಾಟಕದ ನಿಲುವು ಸ್ಪಷ್ಟ: ಎಚ್‌.ಕೆ.ಪಾಟೀಲ

ಗಡಿ ವಿವಾದ: ‘ರಾಜ್ಯಪಾಲರು ಚರ್ಚೆ ಮಾಡಿದ್ದು ತಪ್ಪು’

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 18:31 IST
Last Updated 27 ನವೆಂಬರ್ 2022, 18:31 IST
   

ಹುಬ್ಬಳ್ಳಿ: ‘ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಅನಗತ್ಯ, ಸಮಂಜಸವಲ್ಲದ ಹಾಗೂ ಬೇಜವಾಬ್ದಾರಿಯ ಹೇಳಿಕೆಗಳನ್ನು ಕೊಡುವುದು, ನಿಲುವುಗಳನ್ನು ತಾಳುವುದು ಮಾಡುತ್ತಿದೆ. ಆದರೆ, ಈ ವಿಚಾರದಲ್ಲಿ ಕರ್ನಾಟಕದ ನಿಲುವು ಸ್ಪಷ್ಟವಾಗಿದೆ. ಯಥಾಸ್ಥಿತಿ ಇಲ್ಲವೇ ಮಹಾಜನ್‌ ವರದಿ ಎಂಬುದಕ್ಕೆ ಕರ್ನಾಟಕ ಬದ್ಧವಾಗಿದೆ. ಅದರಲ್ಲಿ ರಾಜಿಯಿಲ್ಲ’ ಎಂದು ಶಾಸಕ ಹಾಗೂ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಎಚ್‌.ಕೆ.ಪಾಟೀಲ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ರಾಜ್ಯ ಸರ್ಕಾರದ ನಿರ್ಣಯ ಮಾತ್ರವಲ್ಲ, ಕರ್ನಾಟಕದ ಮಹಾಜನತೆಯ ನಿರ್ಣಯ. ಆದ್ದರಿಂದ ಈ ನಿರ್ಣಯದಲ್ಲಿ ವ್ಯತ್ಯಾಸ ಮಾಡುವ ಯಾವುದೇ ರೀತಿಯ ಬೇಜವಾಬ್ದಾರಿತನ ಅಥವಾ ಅಂಥ ವರ್ತನೆಗಳನ್ನು ಯಾರೂ ಸರ್ವಥಾ ಒಪ್ಪುವುದಿಲ್ಲ’ ಎಂದರು.

‘ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರವು ಅಲ್ಲಲ್ಲಿ ಎಡವುತ್ತಿದೆ. ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದಾ ಎಂದು ಕೆಲವರು ಕೇಳುತ್ತಿದ್ದಾರೆ. ಮಾತುಕತೆ ನಡೆಸಬಹುದು ಎಂದು ಹೇಳುವ ಅಧಿಕಾರ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ ರಾಜ್ಯದ ರಾಜ್ಯಪಾಲರು ಮಹಾರಾಷ್ಟ್ರದ ರಾಜ್ಯಪಾಲರೊಂದಿಗೆ ಗಡಿ ವಿಚಾರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಯಿತು. ಗಡಿ ವಿಚಾರ ಬಗ್ಗೆ ಮಾತನಾಡುವುದಕ್ಕೆ ರಾಜ್ಯಪಾಲರಿಗೆ ಅಧಿಕಾರ ಕೊಟ್ಟು ಕಳುಹಿಸಿದವರು ಯಾರು? ನಮ್ಮ ರಾಜ್ಯಪಾಲರು ಮಾಡಿದ್ದು ತಪ್ಪು. ಅವೇನು ಎರಡು ರಾಷ್ಟ್ರಗಳಾ? ಅವರೇನು ಎರಡು ರಾಷ್ಟ್ರಗಳ ಮುಖ್ಯಸ್ಥರಾ, ಕುಳಿತು ಮಾತನಾಡಲು? ಯಾವ ಕಾರಣಕ್ಕಾಗಿ ರಾಜ್ಯಪಾಲರನ್ನು ಮಾತುಕತೆಗೆ, ಸಮಾಲೋಚನೆಗೆ, ಚರ್ಚೆಗೆ ಕಳುಹಿಸಿದ್ದಿರಿ ಎಂಬುದನ್ನು ಜನರಿಗೆ ನೀವು ಸ್ಪಷ್ಟಪಡಿಸಬೇಕು’ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

‘ಗಡಿ ಬಗ್ಗೆ ಮಾತನಾಡಲು ನೀವೊಬ್ಬ ಸಚಿವರನ್ನು ನಿಯೋಜಿಸಲು ಆಗಲ್ಲವೇ? ಗಡಿ ವಿಚಾರ ಕುರಿತ ಕಾನೂನು ಹೋರಾಟವೇ ಇರಲಿ ಇಲ್ಲವೇ ಮಹಾರಾಷ್ಟ್ರದಲ್ಲಿ ಗಡಿ ಸಂಬಂಧಿತ ಹೇಳಿಕೆಗಳನ್ನೆ ಕೊಡಲಿ, ಅದಕ್ಕೆ ಪ್ರತಿಹೇಳಿಕೆ ನೀಡಲು ಅಥವಾ ನಿಲುವುಗಳನ್ನು ತಾಳಲು ಅದಕ್ಕಾಗಿ ಒಂದು ಇಲಾಖೆ ಕೆಲಸ ಮಾಡಬೇಕಲ್ಲವೇ. ಗಡಿ ವಿಚಾರ ನಿರ್ವಹಿಸಲು ತಕ್ಷಣವೇ ಒಬ್ಬ ಸಚಿವರನ್ನು ನೇಮಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ನಾನು ಒತ್ತಾಯಿಸುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.