ಬೆಂಗಳೂರು: ಆರ್ಥಿಕತೆಯು ಮಂದಗತಿಯಲ್ಲಿ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ (ಎಸ್ಎಂಇ) ತುರ್ತಾಗಿ ಉತ್ತೇಜನಾ ಕೊಡುಗೆಗಳನ್ನು ನೀಡುವ ಅಗತ್ಯ ಇದೆ ಎಂದು ಕರ್ನಾಟಕ ಸಣ್ಣ ಕೈಗಾರಿಕಾ ಸಂಘವು (ಕಾಸಿಯಾ) ಒತ್ತಾಯಿಸಿದೆ.
‘ಎಸ್ಎಂಇ’ಗಳಿಗೆ ಕರ್ನಾಟಕ ರಾಜ್ಯ ಸರ್ಕಾರವು ಹಣಕಾಸು ನಿಗಮದಿಂದ (ಕೆಎಸ್ಎಫ್ಸಿ) ಶೇ 4ರ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದೆ. ಸಣ್ಣ ಕೈಗಾರಿಕೆಗಳಿಗೆ ಇದರಿಂದ ತುಂಬ ಪ್ರಯೋಜನ ಆಗುತ್ತಿದೆ. ಬ್ಯಾಂಕ್ಗಳಿಂದಲೂ ಅಗ್ಗದ ಬಡ್ಡಿ ದರದಲ್ಲಿ ಸಾಲ ಮತ್ತು ದುಡಿಯುವ ಬಂಡವಾಳ ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ‘ಕಾಸಿಯಾ’ ಅಧ್ಯಕ್ಷ ಆರ್. ರಾಜು ಅವರು ಹೇಳಿದ್ದಾರೆ. ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
‘ಆಟೊಮೊಬೈಲ್ ಮತ್ತು ಇತರ ಕೈಗಾರಿಕೆಗಳಲ್ಲಿನ ಮಂದಗತಿಯು, ಬಿಡಿಭಾಗಗಳನ್ನು ಪೂರೈಸುತ್ತಿರುವ ‘ಎಸ್ಎಂಇ’ಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಆರ್ಥಿಕ ಹಿಂಜರಿತದ ಕಾರಣಕ್ಕೆ ಇನ್ನೂ ಅನೇಕ ‘ಎಸ್ಎಂಇ’ಗಳು ಬಾಗಿಲು ಮುಚ್ಚುವ ಸಾಧ್ಯತೆಗಳಿವೆ. ಇಂತಹ ಆತಂಕ ದೂರ ಮಾಡಲು ‘ಎಸ್ಎಂಇ’ಗಳಿಗೆ ₹ 5 ಕೋಟಿ ತನಕ ಸಾಲ ಖಾತರಿ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
***
ಆನ್ಲೈನ್ ಮೂಲಕ 59 ನಿಮಿಷಗಳಲ್ಲಿ ಸಾಲ ನೀಡುವ ಕೇಂದ್ರ ಸರ್ಕಾರದ ಉಪಕ್ರಮವು ಬರೀ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ
-ಆರ್. ರಾಜು,‘ಕಾಸಿಯಾ’ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.