ADVERTISEMENT

ನ್ಯಾ. ಸದಾಶಿವ ಆಯೋಗದ ವರದಿ ಯಥಾವತ್ ಜಾರಿಗೊಳಿಸಿ: ಕೆ.ಎಚ್‌. ಮುನಿಯಪ್ಪ

ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್‌ನ ಎಡಗೈ ಸಮುದಾಯದ ನಾಯಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:45 IST
Last Updated 31 ಆಗಸ್ಟ್ 2020, 18:45 IST
ಕೆ.ಎಚ್‌. ಮುನಿಯಪ್ಪ (ಸಂಗ್ರಹ ಚಿತ್ರ)
ಕೆ.ಎಚ್‌. ಮುನಿಯಪ್ಪ (ಸಂಗ್ರಹ ಚಿತ್ರ)   

ಬೆಂಗಳೂರು: ‘ಒಳ ಮೀಸಲಾತಿ ಅನುಷ್ಠಾನ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯ ಶಿಫಾರಸುಗಳನ್ನು ಯಥಾವತ್ ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್‌ನ ಎಡಗೈ ಸಮುದಾಯದ ನಾಯಕರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ, ‘ಒಳ ಮೀಸಲಾತಿಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಸದಾಶಿವ ಅವರು ವೈಜ್ಙಾನಿಕವಾಗಿಯೇ ವರದಿ ನೀಡಿದ್ದಾರೆ. ವರದಿ ಜಾರಿಯಾದರೂ ನಾವೆಲ್ಲ ಒಟ್ಟಾಗಿಯೇ ಇರುತ್ತೇವೆ. ಈ ವಿಚಾರದಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.

‘ಉಪ ಮುಖ್ಯಮಂತ್ರಿಯಾಗಿ ಗೋವಿಂದ ಕಾರಜೋಳ ಅವರೇ ಇದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮನಸ್ಸು ಮಾಡಿ ಜಾರಿ ಮಾಡಬೇಕು’ ಎಂದೂ ಮುನಿಯಪ್ಪ ಒತ್ತಾಯಿಸಿದರು.

ADVERTISEMENT

‘ಪರಿಶಿಷ್ಟ ಸಮುದಾಯದಲ್ಲಿ ಎಡಗೈ, ಬಲಗೈ, ಬೋವಿ, ಲಂಬಾಣಿ ಸಮುದಾಯಗಳಿವೆ. ಪ್ರಸ್ತುತ ಸರಿಯಾದ ಪ್ರಮಾಣದಲ್ಲಿ ಮೀಸಲಾತಿ ಸಿಗುತ್ತಿಲ್ಲ. ಯಾವ ಸಮುದಾಯಗಳಿಗೂ ಅನ್ಯಾಯ ಆಗದ ರೀತಿಯಲ್ಲಿ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ’ ಎಂದರು.

‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾಗಿದ್ದರು. ಆದರೆ, ಚುನಾವಣೆ ಎದುರಾದ ಕಾರಣ ಅಲ್ಲಿಗೇ ಕೈಬಿಟ್ಟಿದ್ದರು. ಆದರೆ, ವರದಿ ಜಾರಿ ವಿಷಯದಲ್ಲಿ ಬಿಜೆಪಿಯವರು ಈ ಹಿಂದೆ ಸರಿಯಾಗಿ ಬೆಂಬಲಿಸಲಿಲ್ಲ. ಈಗ ಸರ್ಕಾರ ಬಿಜೆಪಿಯದ್ದೇ ಇದೆ. ಜೆಡಿಎಸ್, ಕಾಂಗ್ರೆಸ್ ಇದಕ್ಕೆ ವಿರೋಧಿಸಲ್ಲ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಕೊಳ್ಳಬೇಕು. ನಂತರ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಬೇಕು’ ಎಂದೂ ಮುನಿಯಪ್ಪ ಒತ್ತಾಯಿಸಿದರು.

ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ ಮಾತನಾಡಿ, ‘ನಾವು ತುಳಿತಕ್ಕೆ ಒಳಗಾದ ಸಮುದಾಯದವರು. ಸ್ಪೃಶ್ಯರನ್ನೂ ನಮ್ಮ ಗುಂಪಿಗೆ ಸೇರಿಸಲಾಗಿದೆ. ಇದರಿಂದ ಮೀಸಲಾತಿಯಲ್ಲಿ ನಮಗೆ ಸಮಸ್ಯೆಯಾಗಿದೆ’ ಎಂದರು.

‘ನಮ್ಮ ಮೀಸಲಾತಿಯಲ್ಲೇ ಸ್ಪೃಶ್ಯರಿಗೂ ಅವಕಾಶ ನೀಡಲಾಗಿದೆ. ಈಗ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಒಳಮೀಸಲಾತಿ ನೀಡಬೇಕು. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವ ಮೂಲಕ ಹೆಚ್ಚು ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಬೇಕು’ ಎಂದು ಒತ್ತಾಯಿಸಿದರು.

‌ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, ‘ಸದಾಶಿವ ಆಯೋಗ ವರದಿಯನ್ನು 2012ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು 24 ಗಂಟೆಯೊಳಗೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ. ಈಗಲಾದರೂ ವರದಿಯನ್ನು ಜಾರಿಗೊಳಿಸಲಿ. ಎಲ್ಲ ಅಸ್ಪೃಶ್ಯರೂ ಒಟ್ಟಾಗಿ ಒಪ್ಪಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.