ADVERTISEMENT

ಕಲಬುರ್ಗಿಯಲ್ಲಿ ವಿರೋಧದ ನಡುವೆ ಕನ್ಹಯ್ಯ ಭಾಷಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 20:23 IST
Last Updated 15 ಅಕ್ಟೋಬರ್ 2019, 20:23 IST
ಕನ್ಹಯ್ಯಕುಮಾರ್‌
ಕನ್ಹಯ್ಯಕುಮಾರ್‌   

ಕಲಬುರ್ಗಿ: ಸಿಪಿಐ ಮುಖಂಡ ಕನ್ಹಯ್ಯಕುಮಾರ್‌ ಅವರ ಉಪನ್ಯಾಸಕ್ಕೆ ನೀಡಿದ್ದ ಅನುಮತಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯವು ಕೊನೆ ಕ್ಷಣದಲ್ಲಿ ಹಿಂದಕ್ಕೆ ಪಡೆಯಿತು. ಇದರಿಂದ ವಿ.ವಿ. ಆವರಣವು ಮಂಗಳವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಈ ಭಾಗದ ಬಿಜೆಪಿಯ ಇಬ್ಬರು ಸಂಸದರು ಹಾಗೂಶ್ರೀರಾಮಸೇನೆಮುಖಂಡರುಉಪನ್ಯಾಸ ಕಾರ್ಯಕ್ರಮ ರದ್ದುಗೊಳಿಸುವಂತೆ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಪರಿಮಳಾ ಅಂಬೇಕರ್‌ ಮೇಲೆ ಒತ್ತಡ ಹೇರಿದ್ದರು. ಸೋಮವಾರ ನಡೆದಿದ್ದ ಸಿಂಡಿಕೇಟ್‌ ಸಭೆಯಲ್ಲಿ ಷರತ್ತುಬದ್ಧ ಅನುಮತಿ ನೀಡಲಾಗಿತ್ತು. ಆ ನಂತರ ಉನ್ನತ ಶಿಕ್ಷಣ ಇಲಾಖೆ ಸೂಚನೆ ಮೇರೆಗೆ, ಪ್ರೊ.ಪರಿಮಳಾ ಅವರು ಅನುಮತಿ ರದ್ದುಪಡಿಸಿರುವುದಾಗಿ ತಡರಾತ್ರಿ ಸಂಘಟಕರಿಗೆ ಮಾಹಿತಿ ನೀಡಿದರು.

ಅಂಬೇಡ್ಕರ್‌ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್‌.ಪಿ.ಮೇಲಕೇರಿ ಅವರು ಕಾರ್ಯಕ್ರಮ ನಡೆಸಿಯೇ ಸಿದ್ಧ ಎಂದು ಪಟ್ಟುಹಿಡಿದಿದ್ದರು. ಬೆಳಿಗ್ಗೆಯೇ ವಿ.ವಿ. ಆವರಣದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿ, ಕಾರ್ಯಕ್ರಮ ನಡೆಯಲಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನಕ್ಕೆ ಕೀಲಿ ಹಾಕಲಾಯಿತು.

ADVERTISEMENT

ನಗರದ ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಹ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಬಿ.ಶರತ್ ಹಾಗೂ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಸಂಘಟಕರಿಗೆ ಸೂಚಿಸಿದರು.

ನಂತರ, ಶ್ರೀನಿವಾಸ ಗುಡಿ ಸ್ಮಾರಕ ಟ್ರಸ್ಟ್‌ ಹಾಗೂ ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹಯ್ಯ, ‘ಪ್ರಧಾನಿ ನರೇಂದ್ರ ಮೋದಿ ಬಹುತ್ವ ಭಾರತದ ಮೇಲೆ ಏಕ ಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದಾರೆ. ದೇಶದ ಯುವಜನತೆ ಇದನ್ನು ಪ್ರಶ್ನಿಸಬೇಕು. ಹೀಗೇ ಮುಂದುವರಿದರೆ ಗದ್ದುಗೆಯಿಂದ ಇಳಿಸಬಲ್ಲೆವು ಎಂಬ ಸಂದೇಶವನ್ನು ಅವರಿಗೆ ರವಾನಿಸಬೇಕು’ ಎಂದು ಗುಡುಗಿದರು.

‘ಹಿಂದೂ– ಮುಸ್ಲಿಮರನ್ನು ಒಡೆದು ಆಳಿದರೆ ಭಾರತೀಯರು ಸ್ವಾತಂತ್ರ್ಯ ಕೇಳುವುದಿಲ್ಲ ಎಂದು ಬ್ರಿಟಿಷರು ಭಾವಿಸಿದ್ದರು. ಮೋದಿ ನೇತೃತ್ವದ ಸರ್ಕಾರ ಸಹ ಮಂದಿರ, ಮಸೀದಿಗಳ ಹೆಸರಿನಲ್ಲಿ ಅದೇ ಮಾದರಿಯ ಆಡಳಿತ ನಡೆಸುತ್ತಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.