ADVERTISEMENT

ಖರ್ಗೆ ಅತ್ಯುತ್ತಮ ಆಯ್ಕೆ: ಪ್ರೊ.ಬಿ.ಕೆ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:12 IST
Last Updated 30 ಸೆಪ್ಟೆಂಬರ್ 2022, 16:12 IST
ಪ್ರೊ.ಬಿ.ಕೆ. ಚಂದ್ರಶೇಖರ್‌
ಪ್ರೊ.ಬಿ.ಕೆ. ಚಂದ್ರಶೇಖರ್‌   

ಬೆಂಗಳೂರು: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯುತ್ತಮ ಅಭ್ಯರ್ಥಿ ಎಂದು ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ. ಚಂದ್ರಶೇಖರ್‌ ಹೇಳಿದ್ದಾರೆ.

ಖರ್ಗೆ ಅವರ ಸ್ವರ್ಧೆಯ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಎಐಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್‌ ಇಬ್ಬರಿಗೆ ಸೀಮಿತವಾಗಿರಬೇಕು. ವಿಭಿನ್ನ ಬಗೆಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ತರದ ಜನರ ನಡುವೆ ಸಂಪರ್ಕ ಸಾಧಿಸುವ ವಿಚಾರದಲ್ಲಿ ಖರ್ಗೆಯವರಿಗೆ ಹೆಚ್ಚು ಅನುಕೂಲಕರ ವಾತಾವರಣ ಇದೆ. ಜಮೀನ್ದಾರಿ ಕುಟುಂಬಗಳ ಪ್ರಾಬಲ್ಯ ಹೊಂದಿದ್ದ ಪ್ರದೇಶದಲ್ಲಿ ಕೂಲಿ ಕಾರ್ಮಿಕರಾಗಿದ್ದ ಪರಿಶಿಷ್ಟ ಜಾತಿಯ ಕುಟುಂಬದಲ್ಲಿ ಹುಟ್ಟಿ ಸ್ವಂತ ಶ್ರಮದಿಂದ ಶಿಕ್ಷಣ ಪಡೆದು, ಜಾತಿಯ ಹೆಸರನ್ನು ಬಳಸದೇ ದುಡಿಮೆಯಿಂದಲೇ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬಂದಿರುವವರು ಅವರು’ ಎಂದಿದ್ದಾರೆ.

‘ಬಡವರು, ಅನಕ್ಷರಸ್ಥರು ಸೇರಿದಂತೆ ಎಲ್ಲ ಜನರ ಅಭಿಪ್ರಾಯವನ್ನು ತಾಳ್ಮೆಯಿಂದ ಆಲಿಸುವ ಸಂಯಮ ಅವರಿಗಿದೆ. ಅತ್ಯುತ್ತಮ ವಾಗ್ಮಿಯಾಗಿರುವ ಅವರು, ಇತರ ರಾಜಕಾರಣಿಗಳಂತೆ ಪ್ರಚಾರಕ್ಕಾಗಿ ಮಾಧ್ಯಮಗಳ ಬಳಿ ಹೋಗುವವರಲ್ಲ. ಯಾವತ್ತೂ ಯಾರ ವಿರುದ್ಧವೂ ವೈಯಕ್ತಿಕ ನಿಂದನೆ ಮಾಡಿದವರಲ್ಲ. ಎಸ್‌.ಎಂ. ಕೃಷ್ಣ ಅವರ ಸಂಪುಟದಲ್ಲಿ ಸಹೋದ್ಯೋಗಿಯಾಗಿ ಅವರ ಆಡಳಿತ ಶೈಲಿಯನ್ನು ಹತ್ತಿರದಿಂದ ನೋಡಿದ್ದೇನೆ’ ಎಂದು ಚಂದ್ರಶೇಖರ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.