ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, ನಾಲ್ಕು ಹಾಲು ಒಕ್ಕೂಟಗಳ ಕಾಂಗ್ರೆಸ್ ನಿರ್ದೇಶಕರನ್ನು ಹೈದರಾಬಾದ್ನಲ್ಲಿರುವ ರೆಸಾರ್ಟ್ಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರದಲ್ಲಿ (ಜೆಡಿಎಸ್–ಕಾಂಗ್ರೆಸ್) ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್
ಶಾಸಕ ಭೀಮಾ ನಾಯ್ಕ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ‘ದೋಸ್ತಿ’ ನಾಯಕರು ಚರ್ಚೆ ನಡೆಸಿದ್ದರು. ಸಿದ್ದ
ರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಈ ಬಗ್ಗೆ ಮಾತುಕತೆ ನಡೆಸಿದ್ದರು. ರೇವಣ್ಣ ಕೂಡಾ ಒಪ್ಪಿದ್ದರು ಎನ್ನಲಾಗಿದೆ. ಆದರೆ, ಇದೀಗ, ಸರ್ಕಾರ ಪತನಗೊಳ್ಳುತ್ತಲೆ ಸಚಿವ ಸ್ಥಾನ ಕಳೆದುಕೊಂಡಿರುವ ರೇವಣ್ಣ, ಕೆಎಂಎಫ್ ಹುದ್ದೆಯನ್ನು ಅಲಂಕರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಲು ಒಕ್ಕೂಟಗಳ ಕಾಂಗ್ರೆಸ್ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ (ಉಡುಪಿ), ಹಿರೇಗೌಡ (ಧಾರವಾಡ), ವೀರಭದ್ರಬಾಬು (ಶಿವಮೊಗ್ಗ), ಶ್ರೀ ಶೈಲ (ವಿಜಯಪುರ) ಅವರನ್ನುಹೈದರಾಬಾದ್ ಬಂಜಾರಾ ಹಿಲ್ಸ್ ಬಳಿ ಇರುವ ರೆಸಾರ್ಟ್ಗೆ ರೇವಣ್ಣ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಅಧ್ಯಕ್ಷ ಸ್ಥಾನದ ಚುನಾವಣೆ ಸೋಮವಾರಕ್ಕೆ (ಜು. 29ರಂದು) ನಿಗದಿಯಾಗಿದೆ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಕಾಂಗ್ರೆಸ್ಸಿನ ಏಳು, ಜೆಡಿಎಸ್ನ ಮೂವರು, ಬಿಜೆಪಿಯ
ಮೂವರು ನಿರ್ದೇಶಕರಿದ್ದು, ಕಾಂಗ್ರೆಸ್ಸಿನ ಒಬ್ಬರು ನಾಮನಿರ್ದೇಶಿತ ನಿರ್ದೇಶಕರಿದ್ದಾರೆ. ಅಲ್ಲದೆ, ಅಧಿಕಾರಿ ವಲಯದಿಂದ ಮೂವರು ಸದಸ್ಯರಿದ್ದಾರೆ.
ಕಾಂಗ್ರೆಸ್ನ ನಿರ್ದೇಶಕರನ್ನು ಸೆಳೆಯುವ ಮೂಲಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲ್ಲಲು ರೇವಣ್ಣ ಭಾರೀ ತಂತ್ರ ರೂಪಿಸುತ್ತಿದ್ದಾರೆ. ತಮ್ಮ ಪಕ್ಷದ ನಾಲ್ವರನ್ನು ಕರೆದುಕೊಂಡು ಹೋಗಿ ಜೊತೆಯಲ್ಲಿ ಇಟ್ಟುಕೊಂಡಿರುವ ರೇವಣ್ಣ ಅವರ ವರ್ತನೆಯಿಂದ ಭೀಮಾ ನಾಯ್ಕ್ ಆಕ್ರೋಶಗೊಂಡಿದ್ದಾರೆ ಎಂದೂ ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.