ಕೆಎಂಎಫ್ (ನಂದಿನಿ)
ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಅಧ್ಯಕ್ಷ ಸ್ಥಾನದ ಚುನಾವಣೆ ಎರಡು ವಾರ ವಿಳಂಬವಾಗುವ ಸಾಧ್ಯತೆಯಿದೆ.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ಪ್ರಕ್ರಿಯೆ ಮುಗಿದಿದ್ದರಿಂದ ಮಾ.6 ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಹುದು ಎಂದು ಹಾಲು ಮಹಾಮಂಡಲದಿಂದ ಕರ್ನಾಟಕ ರಾಜ್ಯ ಸಹಕಾರ ಚುನಾವಣಾ ಆಯೋಗಕ್ಕೆ ಪ್ರಸ್ತಾವವನ್ನು ಸಲ್ಲಿಸಲಾಗಿತ್ತು.
ಆದರೆ, ಮಾ.6 ರಿಂದ ಕರ್ನಾಟಕ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು, ಅದೇ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದಾರೆ. ಮಹಾಮಂಡಲದ ನಿರ್ದೇಶಕರಾಗಿ ಐವರು ವಿಧಾನಸಭಾ ಸದಸ್ಯರು ಇರುವ ಕಾರಣದಿಂದ ಚುನಾವಣೆಯನ್ನು ಎರಡು ವಾರ ಮುಂದೆ ಹಾಕುವ ಸೂಚನೆ ನೀಡಲಾಗಿತ್ತು. ಇದರಿಂದ ಮಾರ್ಚ್ 3ನೇ ವಾರ ಚುನಾವಣಾ ದಿನಾಂಕ ನಿಗದಿಯಾಗಬಹುದು ಎಂದು ಮೂಲಗಳು ತಿಳಿಸಿವೆ.
ಶಾಸಕರಾದ ಎಚ್.ಡಿ.ರೇವಣ್ಣ (ಹಾಸನ ಒಕ್ಕೂಟ), ಬಾಲಚಂದ್ರ ಜಾರಕಿಹೊಳಿ (ಬೆಳಗಾವಿ ಒಕ್ಕೂಟ), ಕೆ.ವೈ.ನಂಜೇಗೌಡ (ಕೋಲಾರ ಒಕ್ಕೂಟ), ರಾಘವೇಂದ್ರ ಹಿಟ್ನಾಳ್ (ಬಳ್ಳಾರಿ, ರಾಯಚೂರು, ಕೊಪ್ಪಳ ಒಕ್ಕೂಟ), ಎಚ್.ವಿ.ವೆಂಕಟೇಶ್ (ತುಮಕೂರು ಒಕ್ಕೂಟ) ಅವರು ಕೆಎಂಎಫ್ ನಿರ್ದೇಶಕರು. ಇವರಲ್ಲದೇ ಇನ್ನೂ 11 ಒಕ್ಕೂಟದ ನಿರ್ದೇಶಕರು ಹಾಗೂ ಸರ್ಕಾರದ ಪ್ರತಿನಿಧಿ, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ.
ಕೆಎಂಎಫ್ನ ಹಿಂದಿನ ಆಡಳಿತ ಮಂಡಳಿಯ ಅವಧಿ 2024ರ ಜುಲೈ 7ಕ್ಕೆ ಮುಕ್ತಾಯಗೊಂಡಿತ್ತು. ಆಗ, ಲೋಕಸಭಾ ಚುನಾವಣೆ ಎದುರಾಗಿದ್ದರಿಂದಾಗಿ, ಆಡಳಿತಾಧಿಕಾರಿ ನೇಮಕ ಮಾಡದೆ ಹಾಲಿ ಆಡಳಿತ ಮಂಡಳಿಯನ್ನೇ ಮುಂದುವರಿಸಲಾಗಿತ್ತು.
ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದ ನಂತರ, ಸಹಕಾರ ಸಂಘಗಳ ನಿಬಂಧಕ ಟಿ.ಎಚ್.ಎಂ. ಕುಮಾರ್ ಅವರನ್ನು ಆರು ತಿಂಗಳ ಅವಧಿಗೆ ಆನಂತರ 2025ರ ಜೂನ್ 4ರಂದು ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.