ಬೆಳಗಾವಿ: ‘ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಜನರು ಗುಳೆ ಹೋಗುತ್ತಿದ್ದಾರೆ. ಜಾನುವಾರುಗಳು ಮೇವು ಸಿಗದೇ ಸಾಯುತ್ತಿವೆ. ಇಂತಹ ಸ್ಥಿತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಇದು ಅವರ ಪಲಾಯನ ಸೂತ್ರವಾಗಿದೆ’ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬರಗಾಲವನ್ನು ಮೆಟ್ಟಿ ನಿಲ್ಲಲು ಮುಖ್ಯಮಂತ್ರಿಯವರು ಕ್ರಮಕೈಗೊಳ್ಳಬೇಕಿತ್ತು. ಗ್ರಾಮ ವಾಸ್ತವ್ಯ ಮಾಡಬೇಕಾದ ಅಗತ್ಯವಿರಲಿಲ್ಲ’ ಎಂದು ಕಿಡಿಕಾರಿದರು.
ವಿದ್ಯುನ್ಮಾನ ಮತಯಂತ್ರದಲ್ಲಿ ದೋಷವಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋತರೆ ಇವಿಎಂ ದೋಷ ಎನ್ನುತ್ತಾರೆ. ಅದೇ ರಾಹುಲ್ ಕೇರಳದಲ್ಲಿ ಗೆದ್ದಾಗ ಇವಿಎಂ ಸರಿಯಾಗಿರುತ್ತದೆ. ದಕ್ಷಿಣ ಕನ್ನಡದಲ್ಲಿ ಏಳು ಜನ ಬಿಜೆಪಿ ಶಾಸಕರು ಗೆದ್ದಾಗ ಇವಿಎಂ ಹಾಳಾಗಿರುತ್ತದೆ. ಕಾಂಗ್ರೆಸ್ನ ಯು.ಟಿ. ಖಾದರ್ ಗೆದ್ದಾಗ ಸರಿಯಾಗಿರುತ್ತದೆ. ಮಲ್ಲಿಕಾರ್ಜುನ ಖರ್ಗೆ ಸೋತಾಗ ಇವಿಎಂ ದೋಷ ಕಾರಣ, ಪ್ರಿಯಾಂಕ ಖರ್ಗೆ ಗೆದ್ದಾಗ ಅದೇ ಇವಿಎಂ ಸರಿಯಾಗಿರುತ್ತದೆ. ಸೋತಿದ್ದಕ್ಕೆಲ್ಲ ಇವಿಎಂ ಕಾರಣ, ಗೆದ್ದಿದ್ದಕ್ಕೆಲ್ಲ ನೀವು ಕಾರಣ ಎಂದರೆ ಏನಿದರ ಅರ್ಥ?’ ಎಂದು ಪ್ರಶ್ನಿಸಿದರು.
ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.