ADVERTISEMENT

ಕೋವಿಡ್‌ ಶಂಕೆ: ಆಸ್ಪತ್ರೆಯಿಂದ ಪರಾರಿಯಾಗಿದ್ದ ವ್ಯಕ್ತಿ ಪತ್ತೆ

ಕೋವಿಡ್‌–19 ಭಯದಿಂದ ನಿಗಾದಲ್ಲಿದ್ದ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 20:32 IST
Last Updated 9 ಮಾರ್ಚ್ 2020, 20:32 IST
   

ಮಂಗಳೂರು: ದುಬೈನಿಂದ ಭಾನುವಾರ ಬಂದಿಳಿದ ಸಂದರ್ಭದಲ್ಲಿ ಜ್ವರದ ಲಕ್ಷಣಗಳು ಕಂಡುಬಂದ ಕಾರಣದಿಂದ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕೋವಿಡ್-19 ವಿಶೇಷ ನಿಗಾ ವಾರ್ಡ್‌ನಲ್ಲಿ ಇರಿಸಿದ್ದ ವ್ಯಕ್ತಿಯೊಬ್ಬ ತಡರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಸೋಮವಾರ ಸಂಜೆ ವೇಳೆ ಪತ್ತೆಯಾಗಿದ್ದಾನೆ.

ಭಾನುವಾರ ದುಬೈನಿಂದ ವಿಮಾನದಲ್ಲಿ ಬಂದ ಉಳ್ಳಾಲ ಸಮೀಪದ ನಿವಾಸಿಯಾಗಿರುವ ಪ್ರಯಾಣಿಕನನ್ನು ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗಿತ್ತು. ಜ್ವರದ ಲಕ್ಷಣಗಳು ಕಂಡುಬಂದ ಕಾರಣ ವೆನ್ಲಾಕ್ ಆಸ್ಪತ್ರೆಯ ವಿಶೇಷ ನಿಗಾ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.

ತಡ ರಾತ್ರಿ 1 ಗಂಟೆ ಸುಮಾರಿಗೆ ಆತನ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ವೆನ್ಲಾಕ್ ಆಸ್ಪತ್ರೆಗೆ ಬಂದು,
ಆ ವ್ಯಕ್ತಿಯನ್ನು ಕಳಿಸಿಕೊಡುವಂತೆ ಗಲಾಟೆ ಮಾಡಿದರು. ಬಳಿಕ, ತಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ ವ್ಯಕ್ತಿ ವೆನ್ಲಾಕ್ ಆಸ್ಪತ್ರೆಯಿಂದ ಬಲವಂತವಾಗಿ ಹೊರ ಹೋಗಿದ್ದಾನೆ.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಿಕಂದರ್ ಪಾಷಾ, ‘ಜ್ವರ ಇದ್ದ ಕಾರಣ ಆತನನ್ನು ನಿಗಾದಲ್ಲಿ ಇರಿಸಲಾಗಿತ್ತು. ಗಲಾಟೆ ಮಾಡಿಕೊಂಡು ತಡ ರಾತ್ರಿ ಆಸ್ಪತ್ರೆಯಿಂದ ಹೊರಹೋಗಿದ್ದಾನೆ. ಆತನ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಪತ್ತೆಗಾಗಿ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದರು.

‘ವ್ಯಕ್ತಿಯನ್ನು ಪತ್ತೆಮಾಡಿ, ಕರೆತರಲಾಗಿದೆ. ಅವರನ್ನು ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.