ADVERTISEMENT

ಇದೇ 19ರಿಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ರಾಜ್ಯ ಪ್ರವಾಸ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 9:28 IST
Last Updated 16 ಆಗಸ್ಟ್ 2022, 9:28 IST
   

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗಾಗಿ ಪಕ್ಷಕ್ಕೆ ಮತ ಬೇಟೆಗಿಳಿಯಲು ಮುಂದಾಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ಇದೇ 19ರಿಂದ ಸೆ. 7ರವರೆಗೆ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಪ್ರವಾಸದ ವೇಳೆ ಮಂದಿರ, ಮಠ, ದರ್ಗಾ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡಲಿರುವ ಅವರು, ಎಲ್ಲ ಸಮುದಾಯಗಳ ಮತಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸ ಯೋಜನೆ ರೂಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ವಿವಿಧ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಮುರುಘಾಮಠ, ಮೂರು ಸಾವಿರ‌ ಮಠ, ಸಿರಿಗೆರೆ ಮಠ, ಮಾದಾರ ಚೆನ್ನಯ್ಯ ಪೀಠ, ಭಗೀರಥ ಪೀಠ, ಭೋವಿ ಗುರುಪೀಠ, ಬೆಕ್ಕಿನಕಲ್ಮಠ, ವಾಲ್ಮೀಕಿ ಪೀಠ, ಹೊಸಹಳ್ಳಿ ರೆಡ್ಡಿ ಪೀಠ, ನಂದಿದುರ್ಗದ ನೊಳಂಬ ಪೀಠ, ಶ್ರೀಕೃಷ್ಣ ಮಠ, ಬಾಳೆ ಹೊನ್ನೂರು ಮಠ, ಶೃಂಗೇರಿ ಶಾರದಾಂಬೆ ಮಠ, ರಂಭಾಪುರ, ಷಡಕ್ಷರಿ ಮಠ, ದೇವನೂರು ಗುರುಮಲ್ಲೇಶ್ವರ‌ ಮಠ, ಚಾಮರಾಜನಗರ ವಿರಕ್ತ ಮಠ, ಗವಿಮಠ, ಯಾದಗಿರಿಯ ಕೋರಿ ಸಿದ್ದೇಶ್ವರ ಮಠ ಭೇಟಿ ಅವರ ಪ್ರವಾಸ ಪಟ್ಟಿಯಲ್ಲಿದೆ. ಅಲ್ಲದೆ, ಖಾಜಾ‌ ಬಂದೇನವಾಜ್ ದರ್ಗಾ, ಪತ್ತೇಸಾಬ ದರ್ಗಾ, ಉಲ್ಲಾಳದ ದರ್ಗಾಕ್ಕೂ ಅವರು ಭೇಟಿ ನೀಡಲಿದ್ದಾರೆ. ಮಂಗಳೂರು ಆರ್ಚ್ ಬಿಷಪ್ ಅವರನ್ನೂ ಭೇಟಿ ಮಾಡಲಿದ್ದಾರೆ.

ADVERTISEMENT

ಕಲ್ಯಾಣ ಕರ್ನಾಟಕ ಭಾಗದಿಂದ ಜಿಲ್ಲಾವಾರು ಪ್ರವಾಸವನ್ಉ ಅವರು ಆರಂಭಿಸಲಿದ್ದಾರೆ. ಇದೇ ಶುಕ್ರವಾರ (ಆಗಸ್ಟ್‌ 19) ಕಲಬುರಗಿಯಲ್ಲಿ ಪ್ರವಾಸಕ್ಕೆ ಭರ್ಜರಿಯಾಗಿ ಚಾಲನೆ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ,‌ ಹಳೇ ಮೈಸೂರು, ಕರಾವಳಿ ಭಾಗಗಳಿಗೆ ಭೇಟಿ ನೀಡಿ, ಪಕ್ಷದ ಸಮಾವೇಶಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.