ಶಿಕಾರಿಪುರ: ಇಂಡೀಕರಣ ಮೂಲಕ ಅರಣ್ಯ ಇಲಾಖೆ ಪಡೆದ ಕಂದಾಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ತಾಲ್ಲೂಕಿನ ಬೇಗೂರು ಮರಡಿ ತಾಂಡಾದಲ್ಲಿ ಬಂಜಾರ ಸಮುದಾಯದ ಜನರೊಂದಿಗೆ ಗುರುವಾರ ನಡೆಸಿದ ಸಂವಾದ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಸರ್ಕಾರಗಳಿವೆ. ಸಂಸತ್ತಿನಲ್ಲಿ ಅರಣ್ಯ ಇಂಡೀಕರಣ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಬಗರ್ಹುಕುಂ ಸಾಗುವಳಿದಾರಿಗೆ ಹಕ್ಕುಪತ್ರ ದೊರಕಿಸಬೇಕು. ಈ ಕುರಿತು ಕಾಂಗ್ರೆಸ್ ಸಹ ಸಂಸತ್ನಲ್ಲಿ ಧ್ವನಿ ಎತ್ತಲಿದೆ. ಸಹೋದರ ಡಿ.ಕೆ.ಸುರೇಶ್ ಮುಂದಿನ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘2010ರಲ್ಲಿ ಸರ್ಕಾರ ಅರಣ್ಯ ಇಂಡೀಕರಣ ಮಾಡಿದ ಪರಿಣಾಮ ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ದೊರೆಯುತ್ತಿಲ್ಲ. ಈ ಕಾನೂನು ತಿದ್ದುಪಡಿ ಮಾಡಬೇಕು. ಕಂದಾಯ ಇಲಾಖೆಗೆ ಭೂಮಿ ವರ್ಗಾವಣೆಯಾದರೆ ಶಿಕಾರಿಪುರ ತಾಲ್ಲೂಕಿನ 15 ಸಾವಿರ ಕುಟುಂಬಗಳಿಗೆ ಭೂಮಿ ಹಕ್ಕುಪತ್ರ ದೊರೆಯಲಿದೆ’ ಎಂದು ಮಾರವಳ್ಳಿ ಉಮೇಶ್ ಸೇರಿದಂತೆ ಹಲವರು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.