ADVERTISEMENT

ಕೆಪಿಎಸ್‌ ನೆಪದಲ್ಲಿ ಶಾಲೆ ಮುಚ್ಚದಿರಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 15:55 IST
Last Updated 22 ನವೆಂಬರ್ 2025, 15:55 IST
   

ಬೆಂಗಳೂರು: ‘ಸರ್ಕಾರವು ಕೆಪಿಎಸ್‌ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನೀತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಇದರ ವಿರುದ್ಧ ಜನಾಂದೋಲನ ರೂಪಿಸಲಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಮತ್ತು ಜಾಗೃತ ನಾಗರಿಕರು ಸಂಘಟನೆಗಳು ಒತ್ತಾಯಿಸಿವೆ.

ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ದುಂಡು ಮೇಜಿನ ಸಭೆಯನ್ನು ಉದ್ದೇಶಿಸಿ ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ, ‘ಒಂದೂ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ ಇಲಾಖೆಯು, ‘ಶಾಲಾ ಶಿಕ್ಷಕರು–ಪೀಠೋಪಕರಣ ಸಮೇತ ಕೆಪಿಎಸ್‌ ಶಾಲೆಗೆ ವರ್ಗಾವಣೆ’ ಎಂದು ಆದೇಶಿಸಿದ್ದಾರೆ. ಇವೆರಡೂ ವ್ಯತಿರಿಕ್ತವಾದುದು. ಸಚಿವರು ಇದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

‘ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂಬ ಉದ್ದೇಶಕ್ಕೆ ಮತ್ತು ಕೆಪಿಎಸ್‌ ಶಾಲೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಇದರ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂಬುದು ನಮ್ಮ ಒತ್ತಾಯ’ ಎಂದರು.

ADVERTISEMENT

ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್, ‘ಮಕ್ಕಳು ವಾಸಿಸುತ್ತಿರುವ ಪ್ರದೇಶದಲ್ಲೇ ಇರುವ ಶಾಲೆಗಳಲ್ಲಿ ಶಿಕ್ಷಣ ಸಿಗಬೇಕು ಎಂಬುದು ಶಿಕ್ಷಣ ಹಕ್ಕು ಕಾಯ್ದೆಯ ನಿಯಮ. ಕೆಪಿಎಸ್‌ ಅಡಿಯಲ್ಲಿ ಮಕ್ಕಳು ಸಮೀಪದ ಶಾಲೆ ಬಿಟ್ಟು, ದೂರದ ಶಾಲೆಗೆ ಹೋಗುವಂತೆ ಮಾಡಲಾಗುತ್ತಿದೆ. ಯುಪಿಎ ಸರ್ಕಾರ ತಂದಿದ್ದ ಕಾಯ್ದೆಗೆ ವಿರುದ್ಧವಾಗಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ನಡೆದುಕೊಳ್ಳುತ್ತಿದೆ’ ಎಂದರು.

ಶಿಕ್ಷಣ ತಜ್ಞ ನಿರಂಜನಾರಾಧ್ಯ, ‘ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯನ್ನು (ಎನ್‌ಇಪಿ) ವಿರೋಧಿಸಿ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು ಮತ್ತು ಎನ್‌ಇಪಿಯನ್ನು ವಾಪಸ್‌ ಪಡೆಯಿತು. ಆದರೆ ಎನ್‌ಇಪಿಯಲ್ಲಿದ್ದ ನೀತಿಗಳನ್ನೇ ಶಿಕ್ಷಣ ಸಚಿವರು ಒಂದೊಂದಾಗಿ ಜಾರಿಗೆ ತರುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.