ADVERTISEMENT

ಕೆಪಿಟಿಸಿಎಲ್‌: ಇಂಧನ ಇಲಾಖೆ ನೇಮಕಾತಿ ಕನ್ನಡಿಗರಿಗೇ ಆದ್ಯತೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:45 IST
Last Updated 6 ಫೆಬ್ರುವರಿ 2022, 20:45 IST
ಕೆಪಿಟಿಸಿಎಲ್‌
ಕೆಪಿಟಿಸಿಎಲ್‌   

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ವ್ಯಾಪ್ತಿಯ ಐದು ಕಂಪನಿಗಳಲ್ಲಿ (ಬೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ) ಖಾಲಿಯಿರುವ ಸಹಾಯಕ ಎಂಜಿನಿಯರ್‌, ಕಿರಿಯ ಸಹಾಯಕ ಎಂಜಿನಿಯರ್‌ ಹಾಗೂ ಕಿರಿಯ ಸಹಾಯಕ ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ತೇರ್ಗಡೆ ಆದವರಿಗೆ ಮಾತ್ರ ಅರ್ಹತಾ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಸರ್ಕಾರದ ಈ ಕ್ರಮದಿಂದಾಗಿ ವಿವಿಧ ಎಸ್ಕಾಂಗಳಲ್ಲಿ ಕನ್ನಡಿಗರೇ ಉದ್ಯೋಗ ಪಡೆಯಲು ಸಹಾಯಕವಾಗಲಿದೆ. ಈ ಬಾರಿ 1,456 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ನೇಮಕಾತಿ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿದೆ.

7ರಿಂದ ಆನ್‌ಲೈನ್‌ ಮೂಲಕಅರ್ಜಿ ಸಲ್ಲಿಸಬಹುದು. ಮಾರ್ಚ್ 7 ಕೊನೆಯ ದಿನ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಯ್ಕೆ ಪರೀಕ್ಷೆ ನಡೆಸಲಿದೆ. ಕೆಇಎ ನಡೆಸುವ ಅಪ್ಟಿಟ್ಯೂಡ್ ಪರೀಕ್ಷೆಗೆ ಅರ್ಹತೆ ಪಡೆಯಲು ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆಯಬೇಕು.

ADVERTISEMENT

2015 ರಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಇತರ ತಾಂತ್ರಿಕ ಹುದ್ದೆಗಳ ನೇಮಕದಲ್ಲಿ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ 60 ಕ್ಕೂ ಹೆಚ್ಚು ಹುದ್ದೆಗಳು ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳ ಅಭ್ಯರ್ಥಿಗಳ ಪಾಲಾಗಿತ್ತು. ಈ ಬಗ್ಗೆ ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಒಕ್ಕೂಟಗಳು ವಿರೋಧಿಸಿದ್ದರೂ ಪ್ರಯೋಜನ ಆಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಎಷ್ಟು ಹುದ್ದೆಗಳು?

ವೃಂದ; ಕಲ್ಯಾಣ ಕರ್ನಾಟಕ; ಮಿಕ್ಕುಳಿದ ವೃಂದ
ಸಹಾಯಕ ಎಂಜಿನಿಯರ್ (ವಿದ್ಯುತ್ ); 106; 399
ಸಹಾಯಕ ಎಂಜಿನಿಯರ್ (ಸಿವಿಲ್ ); 7; 21
ಕಿರಿಯ ಎಂಜಿನಿಯರ್ (ವಿದ್ಯುತ್ ); 84; 486
ಕಿರಿಯ ಎಂಜಿನಿಯರ್ (ಸಿವಿಲ್ ); 8; 21
ಕಿರಿಯ ಸಹಾಯಕ; 3; 357

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.