ADVERTISEMENT

‌ಕೃಷ್ಣಾ ನದಿ ನೀರು, ರಾಜ್ಯಕ್ಕಿಲ್ಲ ಆತಂಕ: ಸಚಿವ ಪ್ರಲ್ಹಾದ್ ಜೋಶಿ

ಕೇಂದ್ರದ ಜಲಶಕ್ತಿ ಸಚಿವರಿಂದ ಸ್ಪಷ್ಟನೆ ದೊರೆತಿದೆ ಎಂದ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 14:47 IST
Last Updated 13 ಅಕ್ಟೋಬರ್ 2020, 14:47 IST
ಸಚಿವ ಪ್ರಲ್ಹಾದ್ ಜೋಶಿ
ಸಚಿವ ಪ್ರಲ್ಹಾದ್ ಜೋಶಿ   

ನವದೆಹಲಿ: ಕೃಷ್ಣಾ ನದಿ ನೀರನ್ನು ಹೊಸದಾಗಿ ಹಂಚಿಕೆ ಮಾಡುವ ಸಂಬಂಧ ಕಣಿವೆ ವ್ಯಾಪ್ತಿಯ ತೆಲಂಗಾಣ ಮತ್ತು ಆಂಧ್ರಪ್ರದೇಶಗಳ ನಡುವೆ ಮಾತ್ರ ಸಮಾಲೋಚನೆ ನಡೆಸಲಾಗುತ್ತದೆ ಎಂದು ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ಸ್ಪಷ್ಟಪಡಿಸಿದ್ದಾರೆ.

‘ಮಂಗಳವಾರ ಈ ಕುರಿತು ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ಅವರೊಂದಿಗೆ ಚರ್ಚಿಸಲಾಗಿದೆ. ಕರ್ನಾಟಕಕ್ಕೆ ಕೃಷ್ಣಾ ನದಿ ನೀರಿನ ಅಂತಿಮ ಹಂಚಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ’ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಕೃಷ್ಣಾ ನೀರನ್ನು ಹೊಸದಾಗಿ ಹಂಚಿಕೆ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶನ ನೀಡಬೇಕು ಎಂಬ ತೆಲಂಗಾಣದ ಕೋರಿಕೆಯನ್ನು ಕಳೆದ ವಾರವಷ್ಟೇ ನಡೆದ ಮುಖ್ಯಮಂತ್ರಿಯವರ ಸಭೆಯಲ್ಲಿ ಪುರಸ್ಕರಿಸಿದ್ದ ಕೇಂದ್ರ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಮೇಲ್ಮನವಿಯನ್ನು ವಾಪಸ್ ಪಡೆದರೆ ಈ ಸಂಬಂಧ ಪರಿಶೀಲನೆ ನಡೆಸಲಾಗುವುದು ಎಂಬ ಭರವಸೆ ನೀಡಿತ್ತು.

ADVERTISEMENT

2010ರಲ್ಲಿ ಕಣಿವೆ ರಾಜ್ಯಗಳಿಗೆ ಅಂತಿಮವಾಗಿ ನೀರು ಹಂಚಿಕೆ ಮಾಡಿ ಐ ತೀರ್ಪು ನೀಡಿರುವ ನ್ಯಾಯಮಂಡಳಿಗೆ ಕೃಷ್ಣಾ ಜಲ ವಿವಾದ ಪ್ರಕರಣದ ಮರು ವಿಚಾರಣೆಗೆ ಸೂಚಿಸುವುದು, ಕಣಿವೆಯ ಮೇಲ್ಭಾಗದ ರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಮಾರಕವಾಗಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು.

ಒಮ್ಮೆ ನೀರು ಹಂಚಿಕೆ ಮಾಡಿರುವ ನ್ಯಾಯಮಂಡಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ವಿಚಾರಣೆ ನಡೆಸುವಂತೆ ಆದೇಶಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೊಸದಾಗಿ ನೀರು ಹಂಚಿಕೆ ಮಾಡುವುದಕ್ಕೂ ಆಗದು ಎಂದು ಜಲ ವಿವಾದ ತಜ್ಞರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.