ADVERTISEMENT

ಕಲಾಪದ ಮೊದಲ ದಿನವೇ ಶಾಸಕರ ನಿರಾಸಕ್ತಿ: ಕೆ.ಎಸ್‌.ಈಶ್ವರಪ್ಪ ಗೈರು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 13:24 IST
Last Updated 19 ಡಿಸೆಂಬರ್ 2022, 13:24 IST
ಬೆಳಗಾವಿ ಸುವರ್ಣ ವಿಧಾನಸೌಧ
ಬೆಳಗಾವಿ ಸುವರ್ಣ ವಿಧಾನಸೌಧ   

ಬೆಳಗಾವಿ (ಸುವರ್ಣ ವಿಧಾನಸೌಧ): ಕಲಾಪದ ಮೊದಲದಿನವೇ ಶಾಸಕರ ನಿರಾಸಕ್ತಿ ಕಂಡು ಬಂದಿತು. ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ ಅತಿ ಕಡಿಮೆ. ಪುನಃ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಬೆಳಗಾವಿ ಜಿಲ್ಲೆಯವರೇ ಆದ ರಮೇಶ್‌ ಜಾರಕಿಹೊಳಿ ಅವರು ವಿಧಾನಸೌಧದತ್ತ ಸುಳಿಯಲೇ ಇಲ್ಲ.

ಸಂತಾಪದ ಮುಗಿಯುವವರೆಗೂ ಕೋರಂಗೆ ಅಗತ್ಯವಿರುವಷ್ಟು ಶಾಸಕರು ಮಾತ್ರ ಹಾಜರಿದ್ದರು. ಬಹುಪಾಲು ಆಸನಗಳು ಖಾಲಿ ಉಳಿದಿದ್ದವು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದರಿಂದ ಜೆಡಿಎಸ್ ಶಾಸಕರ ಸಂಖ್ಯೆಯೂ ವಿರಳವಾಗಿತ್ತು.

ಬಿಜೆಪಿಯ ಹಿರಿಯ ಶಾಸಕ ಈಶ್ವರಪ್ಪ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ತುರ್ತು ಮತ್ತು ಅನಿವಾರ್ಯ ಕಾರಣಗಳಿಂದ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಆದರೆ, ಬಾಗಲಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ಸಚಿವ ಸಂಪುಟಕ್ಕೆ ನನ್ನನ್ನು ತೆಗೆದುಕೊಳ್ಳದ್ದಕ್ಕೆ ಅಭಿಮಾನಿಗಳಿಗೆ ನೋವಾಗಿದೆ‌. ಇದು ನನಗೂ ನೋವುಂಟು ಮಾಡಿದೆ. ಆದ್ದರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ದೂರ ಉಳಿಯುತ್ತೇನೆ' ಎಂದು ಹೇಳಿದರು.

'ಜನರು ಫೋನ್ ಮಾಡಿ ನಿಮ್ಮನ್ನೇಕೆ ಸಂಪುಟಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಇದರಿಂದ ಅಪಮಾನ ಆಗ್ತಿದೆ. ಇದನ್ನು ಅರ್ಥ ಮಾಡಿಸಲು ಸೌಜನ್ಯದ ಪ್ರತಿಭಟನೆ ಮಾಡುತ್ತಿದ್ದೇನೆ' ಎಂದು ಅಸಮಾಧಾನ ಹೊರಹಾಕಿದರು.

'ಬೆಳಗಾವಿಗೆ ಹೋಗ್ತೀನಿ. ಆದರೆ, ಅಧಿವೇಶನಕ್ಕೆ ಹೋಗಲ್ಲ. ಸಭಾಧ್ಯಕ್ಷರಿಂದ ಅನುಮತಿ ಪಡೆಯಲು ಹೋಗುತ್ತಿದ್ದೇನೆ ಎಂದರು.

'ಇವತ್ತು, ನಾಳೆ ನಿಮ್ಮನ್ನ ಸಚಿವರನ್ನ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳುತ್ತಲೇ ಇದ್ದಾರೆ. ಯಾವ ಕಾರಣಕ್ಕೆ ತೆಗೆದುಕೊಳ್ಳುತ್ತಿಲ್ಲ ಗೊತ್ತಿಲ್ಲ' ಎಂದರು.

ರಮೇಶ್‌ ಜಾರಕಿಹೊಳಿ ಅವರೂ ತಮ್ಮನ್ನು ಸಚಿವರನ್ನಾಗಿ ಮಾಡದ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ಅವರು ಈ ಬಾರಿ ಕಲಾಪಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.