ADVERTISEMENT

ಕೆಎಸ್‌ಡಿಎಲ್‌ಗೆ ಕಾರ್ಪೊರೇಟ್‌ ಸ್ಪರ್ಶ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2023, 13:55 IST
Last Updated 22 ಸೆಪ್ಟೆಂಬರ್ 2023, 13:55 IST
<div class="paragraphs"><p>ಎಂ.ಬಿ. ಪಾಟೀಲ</p></div>

ಎಂ.ಬಿ. ಪಾಟೀಲ

   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತಕ್ಕೆ (ಕೆಎಸ್‌ಡಿಎಲ್‌) ಕಾರ್ಪೊರೇಟ್‌ ಸಂಸ್ಥೆಯ ಸ್ಪರ್ಶ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಕಾರ್ಖಾನೆಯ ಆಡಳಿತ ಮಂಡಳಿ ಸಭೆಯ ನಂತರ ಅವರು ಮಾತನಾಡಿದರು.

ADVERTISEMENT

‘ಸಂಸ್ಥೆ ಲಾಭದಲ್ಲಿದ್ದರೂ ಸಮಕಾಲೀನ ಸ್ಪರ್ಧೆಗಳಿಗೆ ತಕ್ಕಂತೆ ಬದಲಾಗಿಲ್ಲ. ಹಾಗಾಗಿ, ಸಂಪೂರ್ಣ ಬದಲಾವಣೆ ತರಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ಸರ್ಕಾರಿ ಉದ್ದಿಮೆಯ ನೋಟವನ್ನೇ ಬದಲಿಸಲಾಗುವುದು. ಕಾರ್ಪೋರೇಟ್‌ ಸಂಸ್ಥೆಯ ರೀತಿ ಅಭಿವೃದ್ಧಿಪಡಿಸಲಾಗುವುದು. ಸ್ನಾನದ ಸಾಬೂನು, ಊದುಬತ್ತಿ ಸೇರಿದಂತೆ ಪ್ರತಿಯೊಂದು ಉತ್ಪನ್ನವೂ ಸಾಮಾನ್ಯ ಕಿರಾಣಿ ಅಂಗಡಿಯಿಂದ ಮಾಲ್‌ಗಳವರೆಗೂ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗುವುದು’ ಎಂದರು.

ಕೆಎಸ್‌ಡಿಎಲ್ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ. ಆದರೆ, ಕರ್ನಾಟಕ ದಾಟಿ ಹೊರಗೆ ಮಾರುಕಟ್ಟೆ ವಿಸ್ತರಣೆಯಾಗಿಲ್ಲ. ಡಾಬರ್, ಹಿಂದೂಸ್ಥಾನ ಯೂನಿಲಿವರ್ ಲಿಮಿಟೆಡ್ ತರಹದ ಕಂಪನಿಗಳು ಸಿಂಹಪಾಲು ಹೊಂದಿವೆ. ಮುಂದಿನ ದಿನಗಳಲ್ಲಿ ಭಾರತದ ಎಲ್ಲೆಡೆ ಕೆಎಸ್‌ಡಿಎಲ್‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಲ್ಯಾವೆಂಡರ್, ಬೇವು, ಗುಲಾಬಿ, ಅರಿಶಿನ ಒಳಗೊಂಡ ಸಾಬೂನುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದು. ಗುಣಮಟ್ಟ, ದಕ್ಷ ಆಡಳಿತ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಗುವುದು. ಸರ್ಕಾರಿ ಕಚೇರಿಗಳು, ಹಾಸ್ಟೆಲ್‌ಗಳಿಗೆ ಕೆಎಸ್‌ಡಿಎಲ್ ಉತ್ಪನ್ನಗಳನ್ನೇ ಸರಬರಾಜು ಮಾಡಲು ಯೋಜನೆ ರೂಪಿಸಲಾಗುವುದು ಎಂದು ವಿವರ ನೀಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್, ಕೈಗಾರಿಕಾ ಇಲಾಖೆಯ ನಿರ್ದೇಶಕ ರಮೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.