ತಮಿಳುನಾಡಿನ ರಾಣಿಪೇಟ ಬಳಿ KSRTC ಬಸ್ ಅಪಘಾತ: ಶ್ರೀನಿವಾಸಪುದ ನಾಲ್ವರ ಸಾವು
ಮುಳಬಾಗಿಲು: ಓಂ ಶಕ್ತಿ ದೇವಾಲಯಕ್ಕೆ ತೆರಳಿದ್ದ ಭಕ್ತರು ಇದ್ದ ksrtc ಬಸ್ಸು ಹಾಗೂ ಕ್ಯಾಂಟರ್ ಸರಕು ವಾಹನದ ನಡುವೆ ತಮಿಳುನಾಡಿನ ರಾಣಿಪೇಟ ಬಳಿ ಬುಧವಾರ ಮಧ್ಯರಾತ್ರಿ ಅಪಘಾತ ಸಂಭವಿಸಿ ಟೆಂಪೊದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಬಸ್ಸಿನಲ್ಲಿದ್ದವರು ಗಾಯಗೊಂಡಿದ್ದಾರೆ.
ಟೆಂಪೊದಲ್ಲಿದ್ದ ಶ್ರೀನಿವಾಸಪುರ ತಾಲ್ಲೂಕಿನ ಸೀಗೇಹಳ್ಳಿಯ ಮಂಜುನಾಥ್, ಶಂಕರ್, ಸೋಮಶೇಖರ್ ಹಾಗೂ ಕೃಷ್ಣಪ್ಪ ಮೃತರು. ಇವರು ಕ್ಯಾಂಟರ್ನಲ್ಲಿ ಚೆನ್ನೈ ಮಾರುಕಟ್ಟೆಗೆ ತರಕಾರಿ ಕೊಂಡೊಯ್ಯುತ್ತಿದ್ದರು.
ಬುಧವಾರ ಬೆಳಿಗ್ಗೆ ಮುಳಬಾಗಿಲು ತಾಲ್ಲೂಕಿನ ನಲ್ಲೂರು ಗ್ರಾಮದಿಂದ 50 ಮಂದಿ ಓಂ ಶಕ್ತಿ ಭಕ್ತರನ್ನು ಒಳಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ತಮಿಳುನಾಡಿನ ಮೇಲ್ ಮರವತ್ತೂರಿಗೆ ತೆರಳಿತ್ತು. ವಾಪಸ್ ಬರುತ್ತಿದ್ದ ವೇಳೆ ತಮಿಳುನಾಡಿನ ರಾಣಿಪೇಟ ಬಳಿ ಕ್ಯಾಂಟರ್ಗೆ ಗುದ್ದಿದೆ.
ಬುಧವಾರ ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಬಸ್ಸಿನಲ್ಲಿದ್ದವರೆಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಅವಘಡ ನಡೆದಿದೆ. ಬಸ್ಸಿನ ಚಾಲಕ ಕೋಲಾರ ತಾಲ್ಲೂಕಿನ ನೆರ್ನಹಳ್ಳಿಯ ಬಾಬು ಹಾಗೂ ಮುಳಬಾಗಿಲು ತಾಲ್ಲೂಕು ನಲ್ಲೂರು ಗ್ರಾಮದ ಸರಸ್ವತಮ್ಮ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಸ್ಸಿನಲ್ಲಿದ್ದ ಐವತ್ತು ಮಂದಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ತಮಿಳುನಾಡಿನ ವೇಲೂರು ಸಿ.ಎಂ.ಸಿ ಆಸ್ಪತ್ರೆ ಹಾಗೂ ರತ್ನಗಿರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಮಿಳುನಾಡಿನ ರಾಣಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಬೆಳಿಗ್ಗೆ ಏಳು ಗಂಟೆಗೆ ಸರಿಯಾಗಿ ನಲ್ಲೂರು ಗ್ರಾಮಕ್ಕೆ ವಾಪಸ್ ಬರಬೇಕೆಂಬ ಉದ್ದೇಶದಿಂದ ಚಾಲಕ ಬಸ್ಸನ್ನು ವೇಗವಾಗಿ ಚಲಾಯಿಸುತ್ತಿದ್ದರು ಎಂಬುದು ತಿಳಿದುಬಂದಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.