ಬೆಂಗಳೂರು: ಶಾಸಕರ ಭವನ ಕಟ್ಟಡದ 5ನೇ ಮಹಡಿಯಿಂದ ಬಿದ್ದು ಶಿವಶಂಕರ್ (44) ಎಂಬುವರು ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
‘ಮಾವಳ್ಳಿಯ ಶಿವಶಂಕರ್, ಕೆಎಸ್ಆರ್ಟಿಸಿ ನೌಕರ. ಶಾಸಕರ ಭವನದಲ್ಲಿರುವ ಟಿಕೆಟ್ ಬುಕ್ಕಿಂಗ್ ಕೌಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಬಂದಿದ್ದರು. ಮಹಡಿಯಿಂದ ಮಧ್ಯಾಹ್ನ ಕೆಳಗೆ ಬಿದ್ದಿದ್ದರು’ ಎಂದು ವಿಧಾನಸೌಧ ಪೊಲೀಸರು ತಿಳಿಸಿದರು.
‘ಜೋರಾದ ಶಬ್ದ ಬಂದಿದ್ದರಿಂದ ಸ್ಥಳಕ್ಕೆ ಹೋಗಿದ್ದ ಕೆಳ ಅಂತಸ್ತಿನಲ್ಲಿರುವ ಹೋಟೆಲ್ ಸಿಬ್ಬಂದಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಶಂಕರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಹೋಟೆಲ್ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ. ಶವವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಸೋಮವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು’ ಎಂದು ಹೇಳಿದರು.
‘ಶಿವಶಂಕರ್ ಅವರು ಆಯತಪ್ಪಿ ಬಿದ್ದಿದ್ದಾರಾ? ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ? ಎಂಬುದು ನಿಖರವಾಗಿ ಗೊತ್ತಾಗಿಲ್ಲ’ ಎಂದು ಪೊಲೀಸರು ಹೇಳಿದರು.
ಕಾರ್ಯಕ್ರಮಕ್ಕೆ ಹೋಗಿದ್ದ ಶಾಸಕರು, ಸಿಬ್ಬಂದಿ: ‘ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ವಿಧಾನಸೌಧ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕರು ಹಾಗೂ ಸಿಬ್ಬಂದಿ ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಭವನದಲ್ಲಿ ಯಾರೂ ಇರಲಿಲ್ಲ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.