ಬೆಂಗಳೂರು: ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ನೌಕರರ ಅಮಾನತು ವಿಷಯದ ಸಂಬಂಧ ಎರಡು ವಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸಾರಿಗೆ ನಿಗಮಗಳಲ್ಲಿನ ಮೇಲ್ಮನವಿ ಪ್ರಾಧಿಕಾರಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
‘ಸಾಂಕ್ರಾಮಿಕ ರೋಗದ ನಡುವೆ ಬಸ್ಗಳ ಕಾರ್ಯಾಚರಣೆ ಸಮರ್ಪಕವಾಗಿ ನಿರ್ವಹಣೆಯಾಗುವ ಉದ್ದೇಶದಿಂದ ಸರ್ಕಾರ ಮತ್ತು ನೌಕರರ ಕೂಟದ ನಡುವೆ ಮಾತುಕತೆ ಏರ್ಪಡುವುದು ಅಗತ್ಯ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
ನೌಕರರ ಮುಷ್ಕರದ ವಿಷಯದಲ್ಲಿ ಮಧ್ಯಪ್ರವೇಶ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತು. ‘ನ್ಯಾಯಾಲಯದ ನಿರ್ದೇಶನದ ಮೇರೆಗೆ ಮುಷ್ಕರ ವಾಪಸ್ ಪಡೆದ ಬಳಿಕವೂ ವರ್ಗಾವಣೆ ಮಾಡಲಾಗಿದೆ’ ಎಂದು ನೌಕರರ ಪರ ವಕೀಲರು ಹೇಳಿದರು.
‘ಅಮಾನತುಗೊಂಡಿರುವ ಎಲ್ಲಾ ನೌಕರರು ಮನವಿಗಳನ್ನು ನಿಗಮಗಳಿಗೆ ಸಲ್ಲಿಸಬೇಕಾಗುತ್ತದೆ. ನಿಗಮಗಳು ಅವುಗಳನ್ನು ಮೇಲ್ಮನವಿ ಅಧಿಕಾರಿಗಳಿಗೆ ರವಾನಿಸಬೇಕು. ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು 10 ದಿನಗಳ ಅವಧಿಯಲ್ಲಿ ಪರಿಗಣಿಸಬೇಕು. ನೌಕರರ ವಜಾ ಪ್ರಶ್ನಿಸಿರುವ ಮನವಿಗಳನ್ನು ಎರಡು ತಿಂಗಳಲ್ಲಿ ಇತ್ಯರ್ಥಪಡಿಸಬೇಕು’ ಎಂದು ಪೀಠ ತಿಳಿಸಿತು.
ಬೇಡಿಕೆಗಳ ವಿಷಯದಲ್ಲಿ ಸರ್ಕಾರ ಮತ್ತು ನೌಕರರ ನಡುವೆ ಮಾತುಕತೆ ಫಲಿಸದಿದ್ದರೆ ಮಧ್ಯಸ್ಥಿಕೆ ವಹಿಸಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲಾಗುವುದು ಎಂದು ಪೀಠ ತಿಳಿಸಿತು. ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.