ADVERTISEMENT

ಕೊರೊನಾ ಹಿನ್ನೆಲೆಯಲ್ಲಿ ಕ್ರಮ: ವಿಆರ್‌ಎಸ್‌ ಜಾರಿಗೆ ತಂದ ಕೆಎಸ್‌ಆರ್‌ಟಿಸಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 19:50 IST
Last Updated 9 ಜೂನ್ 2020, 19:50 IST
   

ಬೆಂಗಳೂರು: ಕೆಲಸ ಮಾಡಲು ಸಾಧ್ಯವಾಗದಷ್ಟು ಅನಾರೋಗ್ಯ ಇರುವ ಅಧಿಕಾರಿಗಳು ಮತ್ತು ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ಕೆಎಸ್‌ಆರ್‌ಟಿಸಿ ಪ್ರಕಟಿಸಿದ್ದು, ಈ ಕುರಿತ ಅರ್ಜಿಗಳನ್ನು ಪರಿಶೀಲಿಸಿ, ಅಂಗೀಕರಿಸಲು ವಿಭಾಗೀಯ ಮಟ್ಟದಲ್ಲಿಯೇ ಸಮಿತಿಗಳನ್ನು ಮಂಗಳವಾರ ರಚನೆ ಮಾಡಿದೆ.

‘ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಕಾರಣದಿಂದ ಮತ್ತು ನೌಕರರ ಹಿತದೃಷ್ಟಿಯಿಂದ ಈ ಯೋಜನೆ ಘೋಷಿಸಲಾಗಿದೆ. ಸ್ವಯಂ ನಿವೃತ್ತಿ ತೆಗೆದುಕೊಳ್ಳುವವರಿಗೆ ಆಕರ್ಷಕ ಪರಿಹಾರವೂ ಸಿಗಲಿದೆ’ ಎಂದೂ ನಿಗಮ ಹೇಳಿದೆ.

ದರ್ಜೆ 3 ಮತ್ತು ದರ್ಜೆ 4ರ ನೌಕರರ ಅರ್ಜಿಗಳನ್ನು ಪರಿಶೀಲಿಸಲು, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ನೌಕರರ ಅರ್ಜಿಗಳನ್ನು ಆಯಾ ಆಡಳಿತ ನಿಯಂತ್ರಣಕ್ಕೆ ಒಳಪಟ್ಟ ವಿಭಾಗದ ಸಮಿತಿಯೇ ಪರಿಶೀಲಿಸಿ ಅಂಗೀಕರಿಸಲು ಸೂಚಿಸಲಾಗಿದೆ. ಎಲ್ಲ ಅಧಿಕಾರಿಗಳು ಅಥವಾ ದರ್ಜೆ 3ರ ಮೇಲ್ವಿಚಾರಕ ನೌಕರರ ಹಾಗೂ ಕೇಂದ್ರ ಕಚೇರಿ ನೌಕರರ ಅರ್ಜಿ ಪರಿಶೀಲಿಸಿ ಅಂಗೀಕರಿಸಲು ಕೇಂದ್ರಕಚೇರಿ ಮಟ್ಟದ ಸಮಿತಿಗೆ ಸೂಚಿಸಲಾಗಿದೆ.

ADVERTISEMENT

‘2012 ಅಕ್ಟೋಬರ್‌ 12ರ ಸುತ್ತೋಲೆಯ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.