ಸುಬ್ರಹ್ಮಣ್ಯ: ಮುಜರಾಯಿ ಇಲಾಖೆ ಅಧೀನದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸಾಲಿನ ವಾರ್ಷಿಕ (2018ರ ಏಪ್ರಿಲ್ನಿಂದ 2019ರ ಮಾರ್ಚ್ ಅಂತ್ಯದವರೆಗೆ) ಆದಾಯ ₹92.09 ಆಗಿದೆ. ಕಳೆದ ವರ್ಷದ ಆದಾಯ ₹ 95.92 ಕೋಟಿ ದಾಖಲಾಗಿತ್ತು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಭಾರಿ ಆದಾಯದಲ್ಲಿ ₹ 3.83 ಕೋಟಿ ಕುಸಿತ ಕಂಡಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಠೇವಣಿ ಇರಿಸಿದ ಹಣಕ್ಕೆ ಬಡ್ಡಿ ಸಿಗದೆ ಇರುವುದು ಹಾಗೂ ಕಳೆದ ಮಳೆಗಾಲದಲ್ಲಿ ಹೆದ್ದಾರಿ, ರಸ್ತೆ ಸಂಚಾರ ಅಡಚಣೆ, ಪ್ರಾಕೃತಿಕ ವಿಕೋಪಗಳಿಂದ ಸಂಚಾರ ವ್ಯತ್ಯಯಗೊಂಡು ಯಾತ್ರಾರ್ಥಿಗಳ ಕೊರತೆ ಆದಾಯ ಕುಸಿತಕ್ಕೆ ಮುಖ್ಯ ಕಾರಣಗಳು ಎಂದು ಅಂದಾಜಿಸಲಾಗಿದೆ ಎಂದು ದೇವಾಲಯದ ಮುಖ್ಯ ಕಾರ್ಯನಿರ್ವಹರ್ಣಾಧಿಕಾರಿ ರವೀಂದ್ರ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ₹180 ಕೋಟಿ ವೆಚ್ಚದ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹ 68 ಕೋಟಿ ಮೊತ್ತವನ್ನು ಲೋಕೋಪಯೋಗಿ ಇಲಾಖೆಯಲ್ಲಿ ಠೇವಣಿ ಇರಿಸಲಾಗಿದೆ. ₹ 73 ಕೋಟಿ ಮೊತ್ತವನ್ನು ಆಡಳಿತ ಮಂಡಳಿ ಠೇವಣಿಯಾಗಿ ಹೊಂದಿದೆ. 2006-07ರಲ್ಲಿ ದೇಗುಲದ ಆದಾಯ ₹19.76 ಕೋಟಿ ಇದ್ದರೆ, 2017-18ರಲ್ಲಿ ₹ 94.92 ಕೋಟಿ ಆದಾಯ ಗಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.