ಕುಣಿಗಲ್: ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರ ಸಿದ್ಧಾಪುರ ಗ್ರಾಮದ ಬಳಿ ಶುಕ್ರವಾರ ಭೀಕರ ಅಪಘಾತ ನಡೆದಿದ್ದು ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಗೌಂಡಮಣಿ, ವೀರಮ್ಮ, ಸೆಲ್ವಿ, ನಾಗಮಣಿ, ಉಮಾ, ನಿರ್ಮಲಾ ಮತ್ತು ಕಾಳಿದಾಸ ಮೃತಪಟ್ಟವರು. ಮೃತರು 30ರಿಂದ 35 ವರ್ಷದ ಒಳಗಿನವರಾಗಿದ್ದು ಬೆಂಗಳೂರಿನ ಸಂಜಯನಗರದ ನಿವಾಸಿಗಳಾಗಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಕಾರು ಚಾಲಕ ಯೋಗೀಶ್, ಭವಾನಿ ಹಾಗೂ ಪಂಚಾಲಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಒಂದೂವರೆ ವರ್ಷದ ಸಾಧಿಕ್ಗೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಎಲ್ಲರೂ ನೆರೆಹೊರೆಯವರು. ತಾಲ್ಲೂಕಿನ ಎಡೆಯೂರು ಸಿದ್ದಲಿಂಗೇಶ್ವರ ದೇವಾಲಯಕ್ಕೆ ಇನೋವಾ ಕಾರಿನಲ್ಲಿ ಬಂದಿದ್ದರು. ಪೂಜೆ
ಸಲ್ಲಿಸಿ ನಂತರ ಮಾರ್ಕೋನಹಳ್ಳಿ ಜಲಾಶಯ ವೀಕ್ಷಿಸಿ ಬೆಂಗಳೂರಿಗೆ ಮರಳುತ್ತಿದ್ದರು.
ಸಿದ್ದಾಪುರದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆಯಿತು. ಚಕ್ರಗಳು ಸಿಡಿದು ಕಾರು ರಸ್ತೆಯ ಮತ್ತೊಂದು ಬದಿಗೆ ಬಿದ್ದಿತು. ಕಾರು ಉರುಳಿದ ರಭಸಕ್ಕೆ ಅದರಲ್ಲಿ ಇದ್ದವರು ಶವವಾಗಿ ರಸ್ತೆಗೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
‘ಮೃತರೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು’ ಎಂದು ಮೃತರ ಸಂಬಂಧಿ ಕೀರ್ತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.