ಶಿರಾ: ಪರಿಶಿಷ್ಟ ಪಂಗಡದ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆಯಿಂದ ಹೊರಟಿ ರುವ ಪಾದಯಾತ್ರೆ ಶುಕ್ರವಾರ 15ನೇ ದಿನಕ್ಕೆ ಕಾಲಿಟ್ಟಿದ್ದು, ತುಮಕೂರು ಜಿಲ್ಲೆ ಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.
ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಭಾಗದ ಕುರುಬ ಸಮುದಾಯದವರಲ್ಲಿ ಸಂಚ ಲನ ಮೂಡಿಸಿದ್ದು, ಹೊಸ ಚೈತನ್ಯ ತುಂಬಿದೆ. ಪಾದಯಾತ್ರೆಯಲ್ಲಿ ಭಾಗವಹಿ ಸಿದ್ದ ಕೆಲವರು ಕಂಬಳಿ ಹೊದ್ದು, ಹಳದಿ ಪೇಟಧರಿಸಿ ಹಣೆಗೆ ಭಂಡಾರ ಧರಿಸಿ ಸಾಗಿದ್ದು ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿರುವ ಕಲಾ ತಂಡಗಳ ಜತೆಗೆ ‘ಕುರುಬರೋ ನಾವು ಕುರುಬರೋ...’ ಗೀತೆ ಯುವಕರಲ್ಲಿ ಕಿಚ್ಚು ಎಬ್ಬಿಸಿ ಕುಣಿಯುವಂತೆ ಮಾಡಿತು.
ಶಿರಾದಲ್ಲಿ ಗುರುವಾರ ರಾತ್ರಿವಾಸ್ತವ್ಯ ಮಾಡಿದ್ದು, ಬೆಳಿಗ್ಗೆ ಪಾದಯಾತ್ರೆ ಪ್ರಾರಂಭಿಸಿದರು. ಕಳ್ಳಂಬೆಳ್ಳ ಗ್ರಾಮ ತಲುಪಿ, ಅಲ್ಲಿ ವಿಶ್ರಾಂತಿ ಪಡೆದರು.
ಕಳ್ಳಂಬೆಳ್ಳದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ನಿರಂಜನಾನಂದಪುರಿ ಸ್ವಾಮೀಜಿ, ‘ಕುರುಬರು ಯಾರ ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿಲ್ಲ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಎಸ್.ಟಿ ಮೀಸಲಾತಿ ನೀಡಲಾಗಿದೆ. ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ಕೇಂದ್ರ, ರಾಜ್ಯ ಸರ್ಕಾರಗಳ ಮೇಲೆ ಹಕ್ಕೊತ್ತಾಯ ಮಾಡಲು ಫೆ. 7ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. 10 ಲಕ್ಷ ಮಂದಿ ಭಾಗವಹಿಸಲಿದ್ದು, ನಮ್ಮ ಧ್ವನಿ ಸಂಸತ್ತಿಗೆ
ಕೇಳಿಸಬೇಕು’ ಎಂದರು.
ಶುಕ್ರವಾರದ ಪಾದಯಾತ್ರೆಯಲ್ಲಿ ಮೈಸೂರು, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಕುರುಬ ಸಮುದಾಯದವರು ಹೆಜ್ಜೆ ಹಾಕಿದರು. ಜನಜಾಗೃತಿ ಸಭೆಯ ನಂತರ ಪಾದಯಾತ್ರೆ ಮುಂದುವರಿದಿದ್ದು ರಾತ್ರಿ ಶೀಬಿ ಗ್ರಾಮದಲ್ಲಿ ನೆಲೆಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.