ADVERTISEMENT

ಕುರುಬ ಸಮುದಾಯ ಎಸ್‌.ಟಿ ಸೇರ್ಪಡೆಗೆ ಒತ್ತಾಯ; ಜ.15ರಿಂದ ಬೆಂಗಳೂರಿಗೆ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 17:13 IST
Last Updated 7 ನವೆಂಬರ್ 2020, 17:13 IST

ಹುಬ್ಬಳ್ಳಿ: ‘ರಾಜ್ಯದಾದ್ಯಂತ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಕನಕ ಪೀಠದ ಗುರುಗಳ ನೇತೃತ್ವದಲ್ಲಿ ಜನವರಿ 15ರಿಂದ ಫೆಬ್ರುವರಿ 7ರವರೆಗೆ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಕುರುಬ ಎಸ್‌.ಟಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಕೆ.ವಿ. ವಿರೂಪಾಕ್ಷಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾತಂತ್ರ್ಯಪೂರ್ವ ದೇಶವನ್ನಾಳಿದ ಬ್ರಿಟಿಷ್‌ ಸರ್ಕಾರ ನಮ್ಮನ್ನು ಬುಡಕಟ್ಟು ಜನಾಂಗವೆಂದು ಕರೆದಿತ್ತು. ದಕ್ಷಿಣ ಭಾರತದ ಅತ್ಯಂತ ಪುರಾತನ ಮೂಲ ನಿವಾಸಿಗಳು, ಅರೆನಾಗರಿಕ ಬುಡಕಟ್ಟು ಜನಾಂಗದವರೆಂದು ಅವರು ದಾಖಲಿಸಿದ್ದಾರೆ. ಸ್ವಾತಂತ್ರ್ಯಾನಂತರ ನಮ್ಮ ಉಪಪಂಗಡದ ಕೆಲವು ಜಾತಿಗಳು ಪರಿಶಿಷ್ಟ ಜಾತಿಗೆ ಸೇರಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾದವು. ಅದರಿಂದ ನಿಜವಾದ ಕುರುಬರಿಗೆ ಅನ್ಯಾಯವಾಗಿದೆ’ ಎಂದರು.

‘ಕುರುಬ ಸಮುದಾಯದ ಕುರುಬ, ಗೊಂಡ, ಕಾಡುಕುರುಬ, ಜೇನುಕುರುಬ, ಕುರುಂಬನ್‌ ಮತ್ತು ಕಟ್ಟುನಾಯಕನ್‌ ಮೂಲ ಜಾತಿಗಳನ್ನು ಕೊಡಗು ಜಿಲ್ಲೆಯಲ್ಲಿ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ. ರಾಜ್ಯದಾದ್ಯಂತ ವಿಸ್ತರಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರಲು, ಕುರುಬರ ಎಸ್‌.ಟಿ ಹೋರಾಟ ಸಮಿತಿ ರಚಿಸಿಕೊಂಡು ಯೋಜನೆ ಸಿದ್ಧಪಡಿಸುತ್ತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.