
ಅಮಿತ್ ಶಾ
ಪಿಟಿಐ ಚಿತ್ರ
ದರ್ಬಾಂಗ್/ಸಮಷ್ಠಿಪುರ/ಬೆಗುಸರಾಯ್(ಬಿಹಾರ): ಐಎನ್ಡಿಐಎ, ಆರ್ಜೆಡಿ ಸೇರಿ ರಚಿಸಿಕೊಂಡಿರುವ ಮೈತ್ರಿಕೂಟ ‘ಮಹಾಘಟಬಂಧನ’ ಅಲ್ಲ, ಅದು ‘ಕಳ್ಳರ ಕೂಟ’ವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಲೇವಡಿ ಮಾಡಿದ್ದಾರೆ.
ದರ್ಬಾಂಗ್ನಲ್ಲಿ ಆಯೋಜಿಸಿದ್ದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಲಾಲುಪ್ರಸಾದ್ ಅವರು ಮೇವು, ಉದ್ಯೋಗಕ್ಕಾಗಿ ಭೂಮಿಯಂತಹ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ₹12 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದೆ. ಇದೊಂದು ಕಳ್ಳರ ಮೈತ್ರಿಕೂಟ’ ಎಂದು ಶಾ ಕರೆದಿದ್ದಾರೆ.
‘ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಲವು ಯುವಕರಿಗೆ ಟಿಕೆಟ್ ನೀಡಿದೆ. ರಾಜಕೀಯ ಹಿನ್ನೆಲೆ ಇಲ್ಲದ ಮೈಥಿಲಿ ಠಾಕೂರ್ ಅವರಂಥವರನ್ನು ಕಣಕ್ಕಿಳಿಸಿದೆ. ಆದರೆ, ಆರ್ಜೆಡಿ ಮತ್ತು ಕಾಂಗ್ರೆಸ್ ಅಂಥ ಪ್ರಯತ್ನಗಳನ್ನು ಮಾಡಿಲ್ಲ. ಬದಲಿಗೆ ಲಾಲು ಅವರು ಮಗನನ್ನು ಬಿಹಾರ ರಾಜ್ಯದ ಮುಖ್ಯಮಂತ್ರಿಯಾಗಿಸಲು, ಸೋನಿಯಾಗಾಂಧಿ ಅವರು, ರಾಹುಲ್ ಗಾಂಧಿಯವರನ್ನು ಪ್ರಧಾನ ಮಂತ್ರಿ ಮಾಡಲು ಹೊರಟಿದ್ದಾರೆ. ಆ ಎರಡೂ ಸ್ಥಾನಗಳು ಖಾಲಿ ಇಲ್ಲ’ ಎಂದು ಶಾ ಹೇಳಿದ್ದಾರೆ.
’ಕೇಂದ್ರ ಸರ್ಕಾರ ಪಿಎಫ್ಐ ಅನ್ನು ನಿಷೇಧಿಸಿದ ಬಳಿಕ, ಈ ಸಂಘಟನೆಯ ಸದಸ್ಯರನ್ನು ಬಂಧಿಸಲಾಯಿತು. ಬಿಹಾರದಲ್ಲಿ ಒಂದು ವೇಳೆ, ಕಾಂಗ್ರೆಸ್–ಆರ್ಜೆಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈಗಾಗಲೇ ಬಂಧಿಸಿರುವ ಪಿಎಫ್ಐ ಸಂಘಟನೆಯ ಸದಸ್ಯರು ಜೈಲಿನಲ್ಲಿರುತ್ತಾರೆಯೇ‘ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.