ADVERTISEMENT

ರಾಜತಾಂತ್ರಿಕ ಕೌಶಲಗಳಿಂದ ದೇಶಗಳ ಯಶಸ್ಸು: ಅನಿರುದ್ಧ ರಜಪೂತ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 17:32 IST
Last Updated 8 ಅಕ್ಟೋಬರ್ 2021, 17:32 IST

ಬೆಂಗಳೂರು: ‘ಭಾರತವು ತನ್ನ ಸಾಂಸ್ಕೃತಿಕ ರಾಜತಾಂತ್ರಿಕತೆಯ ಮುಖೇನ ಇಡೀ ವಿಶ್ವದ ಮೇಲೆ ಪ್ರಭಾವ ಬೀರಿದೆ. ವಿಶ್ವವನ್ನು ಮುನ್ನಡೆಸಲು ರಾಜತಾಂತ್ರಿಕತೆ ಒಂದು ಬಲವಾದ ಸಾಧನ’ ಎಂದುವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾನೂನು ಆಯೋಗದ ಸದಸ್ಯ ಅನಿರುದ್ಧ ರಜಪೂತ್ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದಕಾನೂನು ಕಾಲೇಜು ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಮಾದರಿ ವಿಶ್ವಸಂಸ್ಥೆಯ ಸಮ್ಮೇಳನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿನ ಯೋಗ ಇಂದು ಬಹುತೇಕ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿದ್ದು, ಅಂತರರಾಷ್ಟ್ರೀಯ ಯೋಗ ದಿನವಾಗಿ ಹಬ್ಬಿದೆ. ದೇಶದ ಚಲನಚಿತ್ರ ಗೀತೆಗಳನ್ನು ಬೇರೆ ದೇಶದ ಜನ ಹಾಡುತ್ತಾರೆ.ರೂಪಾಂತರಗೊಂಡಿರುವ ರಾಜತಾಂತ್ರಿಕ ಕೌಶಲಗಳಿಂದಲೇ ಇಂದು ಹಲವು ದೇಶಗಳು ಯಶಸ್ಸನ್ನು ಕಂಡಿವೆ’ ಎಂದರು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್,‘ಮಾದರಿ ವಿಶ್ವಸಂಸ್ಥೆಯ ಸಮ್ಮೇಳನಕ್ಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ. ಮಾದರಿ ಸಮ್ಮೇಳನದಿಂದ ವಿಶ್ವಸಂಸ್ಥೆಯಲ್ಲಿ ಯಾವ ರೀತಿ ಚರ್ಚೆಗಳು ನಡೆಯುತ್ತವೆ? ಅಲ್ಲಿನ ವ್ಯವಸ್ಥೆಗಳ ಕುರಿತಾದ ಅನುಭವವನ್ನು ವಿದ್ಯಾರ್ಥಿಗಳು‌ ಪಡೆಯಲಿದ್ದಾರೆ’ ಎಂದು ಹೇಳಿದರು.

ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಪ್ರಾಂಶುಪಾಲ ಸುರೇಶ್‌ ವಿ.ನಾಡಗೌಡರ್, ಪ್ರೊ.ವಿ.ಸುದೇಶ್, ಪ್ರೊ.ದಶರಥ್‌, ವಿಶ್ವನಾಥ್ ಗೌಡ, ಜ್ಯೋತಿ ವಿಶ್ವನಾಥ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.