ADVERTISEMENT

ಮಹಾಘಟಬಂಧನಕ್ಕೆ ‘ಎಡ’ಬಲ

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 20:08 IST
Last Updated 9 ನವೆಂಬರ್ 2018, 20:08 IST
ಸೀತಾರಾಂ ಯಚೂರಿ
ಸೀತಾರಾಂ ಯಚೂರಿ   

ಕೊಪ್ಪಳ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರ ಮತ್ತು ಕೋಮುವಾದದಲ್ಲಿ ತೊಡಗಿದೆ. ಆದ್ದರಿಂದ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಏಕೈಕ ಗುರಿಯೊಂದಿಗೆ ಕಾಂಗ್ರೆಸ್ ನೇತೃತ್ವದ ಮಹಾ ಘಟಬಂಧನಕ್ಕೆ ನಮ್ಮ ಸಹಮತವಿದೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆಶುಕ್ರವಮಾತನಾಡಿದ ಅವರು, ‘ಮೋದಿ ದೇಶದಲ್ಲಿ ಅತ್ಯಂತಕೀಳುರಾಜಕೀಯ ಮಾಡುತ್ತಿದ್ದಾರೆ. ಹಿಂದೂ- ಮುಸ್ಲಿಮರ ನಡುವೆ ಬಿರುಕು ಮೂಡಿಸುತ್ತಿದ್ದಾರೆ. ಮತಗಳಿಗಾಗಿ ಇಂತಹ ಕೀಳುಮಟ್ಟದ ರಾಜಕೀಯ ಮಾಡಬಾರದು. ದೇಶ ಬಡವಾಗುತ್ತಿದೆ. ಹಾಗಾಗಿ ಜಾತ್ಯತೀತ ಸರ್ಕಾರ ರಚನೆಯಾಗಬೇಕಾದ ಅವಶ್ಯವಿದೆ’ ಎಂದು ಪ್ರತಿಪಾದಿಸಿದರು.

‘ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಮೋದಿ ದೊಡ್ಡಮೊತ್ತದ ನೋಟುಗಳ ಅಮಾನ್ಯದ ಅಸ್ತ್ರ ಬಳಸಿದರು. ಆದರೆ, ಈ ಕ್ರಮದಿಂದಾಗಿ ದೇಶದ ಕೋಟ್ಯಂತರ ಜನರಿಗೆ ತೊಂದರೆಯಾಗಿದೆ. ಲಕ್ಷಾಂತರ ಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಬಡವರು, ಕಾರ್ಮಿಕರು, ವ್ಯಾಪಾರಸ್ಥರು ನರಳುತ್ತಿದ್ದಾರೆ. ಇದು ರಫೆಲ್‌ಗಿಂತ ದೊಡ್ಡ ಹಗರಣ’ ಎಂದರು.

ADVERTISEMENT

‘ಫಸಲ್ ಬಿಮಾ ಯೋಜನೆರೈತರಿಗೆ ಬದಲು ವಿಮಾ ಕಂಪನಿಗಳಿಗೆ ಲಾಭ ಆಗಿದೆ. ಈವರೆಗೆ ರೈತರ ಖಾತೆಗೆ ಎಷ್ಟು ಹಣ ಬಂದಿದೆ ಎಂದು ಮೋದಿ ಹೇಳಬೇಕು. ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಪ್ರಧಾನಿಗೆ ಮಾಹಿತಿ ಇಲ್ಲ ಅನಿಸುತ್ತೆ. ಅವರೇನಿದ್ದರೂ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ದುಡಿಯುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

**

ಮಹಾಮೈತ್ರಿ; ಸ್ವಾಗತಾರ್ಹ

ಕಲಬುರ್ಗಿ: ‘ಬಿಜೆಪಿ ಹಣಿಯಲು ಪ್ರಾದೇಶಿಕ ಪಕ್ಷಗಳು ಮಹಾಮೈತ್ರಿಗೆ ಮುಂದಾಗಿರುವುದು ಸ್ವಾಗತಾರ್ಹ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಜನರನ್ನು ಹೆದರಿಸಿ, ಬೆದರಿಸಿ ಆಡಳಿತ ನಡೆಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಸರ್ವಾಧಿಕಾರಿ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಮಹಾಮೈತ್ರಿಯ ಅವಶ್ಯವಿದೆ’ ಎಂದರು.

‘ಉಪ ಚುನಾವಣೆ ಫಲಿತಾಂಶವನ್ನು ಗಮನಿಸಿದರೆ ರಾಜ್ಯದ ಜನ ಸಮ್ಮಿಶ್ರ ಸರ್ಕಾರದ ಪರವಾಗಿ ಇದ್ದಾರೆ ಎಂಬುದು ಗೊತ್ತಾಗುತ್ತದೆ. ಜನ ಮೊದಲಿನಿಂದಲೂ ಬಿಜೆಪಿ ವಿರುದ್ಧ ಇದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.