ADVERTISEMENT

ಸರ್ಕಾರದ ಸೂಚನೆ ಮೇರೆಗೆ ಇದೇ 15ಕ್ಕೆ ಪರಿಷತ್‌ ಕಲಾಪ

ಸಭಾಪತಿ ಪದಚ್ಯುತಿಗೋ ಗೋಹತ್ಯೆ ನಿಷೇಧ ಮಸೂದೆಗೋ?

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 19:50 IST
Last Updated 12 ಡಿಸೆಂಬರ್ 2020, 19:50 IST
   

ಬೆಂಗಳೂರು: ಅನಿರ್ದಿಷ್ಟಾವಧಿಗೆ ಮುಂದೂಡಿದ್ದ ವಿಧಾನಪರಿಷತ್‌ ಅಧಿವೇಶನವನ್ನು ಮತ್ತೆ ಡಿ. 15ರಂದು ಕರೆಯಲಾಗಿದೆ.

ಸರ್ಕಾರದ ಸೂಚನೆ ಮೇರೆಗೆ ಅಧಿವೇಶನ ಕರೆಯಲಾಗಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಕೆ.ಆರ್‌. ಮಹಾಲಕ್ಷ್ಮಿ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ನೋಟಿಸ್‌ ಅನ್ನು ಚರ್ಚಗೆ ಎತ್ತಿಕೊಳ್ಳುವುದು ಹಾಗೂ ಗೋಹತ್ಯೆ ನಿಷೇಧ ಮಸೂದೆಗೆ ಒಪ್ಪಿಗೆ ಪಡೆಯುವುದು ಮತ್ತೊಮ್ಮೆ ಅಧಿವೇಶನ ಕರೆದ ಉದ್ದೇಶ ಎಂದು ಬಿಜೆಪಿ ಮೂಲಗಳು ಹೇಳಿವೆ.

ADVERTISEMENT

‘ಗೋಹತ್ಯೆ ನಿಷೇಧ ಮಸೂದೆಗೆ ಒಪ್ಪಿಗೆ ಪಡೆಯುವುದು ಸೇರಿದಂತೆ ಪರಿಷತ್ತಿನ ಕಲಾಪಗಳು ನಡೆಯಲಿವೆ. ಆದರೆ, ಅದಕ್ಕಿಂತ ಮುನ್ನವೇ ಸಭಾಪತಿ ವಿರುದ್ಧ ನೀಡಿರುವ ಅವಿಶ್ವಾಸ ನಿರ್ಣಯದ ನೋಟಿಸ್‌ ವಿಷಯ ಇತ್ಯರ್ಥ್ಯವಾಗಬೇಕಾಗಿದೆ. ಈ ವಿಷಯವನ್ನು ಪ್ರಮುಖವಾಗಿ ಚರ್ಚೆಗೆ ತೆಗೆದುಕೊಳ್ಳುವುದು ಬಿಜೆಪಿ ಆದ್ಯತೆಯಾಗಿದೆ. ಸಭಾಪತಿ ಅವರು ಕಲಾಪದ ಕಾರ್ಯಸೂಚಿ ಪ್ರಕಟಿಸಿದ ಬಳಿಕ ಪಕ್ಷ ಮುಂದಿನ ಹೆಜ್ಜೆ ಇಡಲಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಿಜೆಪಿಯ ಆಯನೂರು ಮಂಜುನಾಥ್‌ ಮತ್ತು ಇತರ 11 ಸದಸ್ಯರು ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ನ. 25ರಂದು ನೋಟಿಸ್‌ ನೀಡಿದ್ದಾರೆ. ನೋಟಿಸ್‌ ನೀಡಿದ 14 ದಿನಗಳ ತರುವಾಯ ಅದನ್ನು ಸದನದಲ್ಲಿ ಸಭಾಪತಿ ಚರ್ಚೆಗೆ ಎತ್ತಿಕೊಳ್ಳಬೇಕಿತ್ತು. ಆದರೆ, ನೋಟಿಸ್‌ನಲ್ಲಿ ಕೆಲವು ಅನುಮಾನಗಳಿರುವುದರಿಂದ ಕಾನೂನು ತಜ್ಞರ ಸಲಹೆ ಪಡೆದಿದ್ದು, ಅದನ್ನು ಅಧಿಕಾರಿಗಳ ಮೂಲಕ ಎಲ್ಲ ಸದಸ್ಯರಿಗೆ ತಲುಪಿಸಲಾಗುವುದು ಎಂದು ಪ್ರಕಟಿಸಿದ ಸಭಾಪತಿ, ಡಿ.10ರಂದು ಸಂಜೆ ಅನಿರ್ದಿಷ್ಟಾವಧಿಗೆ ಸದನವನ್ನು ಮುಂದೂಡಿದ್ದರು. ಇದರಿಂದ ಕೆರಳಿದ್ದ ಬಿಜೆಪಿ ಸದಸ್ಯರು, ಸಭಾಪತಿ ಅಸಾಂವಿಧಾನಿಕವಾಗಿ ವರ್ತಿಸಿದ್ದಾರೆಂದು ದೂರಿ ರಾಜಭವನದ ಕದ ತಟ್ಟಿದ್ದರು.

‘15ರಂದು ಪರಿಷತ್‌ ಕಲಾಪ ನಡೆಯಲಿದೆ. ಆದರೆ. ಅಂದಿನ ಕಾರ್ಯಕಲಾಪದ ಬಗ್ಗೆ ಸದ್ಯ ನನಗೇನೂ ಗೊತ್ತಿಲ್ಲ. ಸಭಾಪತಿಯವರು ಹಿಂದಿನ ದಿನ (ಡಿ. 14) ಕಲಾಪ ಕಾರ್ಯಸೂಚಿ ಪಟ್ಟಿ ಕೊಡುತ್ತಾರೆ. ನಂತರವಷ್ಟೆ ಅಂದಿನ ಕಾರ್ಯಕಲಾಪದ ಮಾಹಿತಿ ಗೊತ್ತಾಗಲಿದೆ’ ಎಂದೂ ಮಹಾಲಕ್ಷ್ಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.