ಬೆಂಗಳೂರು: ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳನ್ನು ಪರಿಶೀಲಿಸಿ, ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ, ಶೀಘ್ರದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಹಿಂದೆ ರೂಪಿಸಿರುವ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆಗಳನ್ನು ತರುವ ಅಗತ್ಯವಿದೆ. ಇದಕ್ಕಾಗಿ ಸಮಿತಿ ನೇಮಿಸುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡುವ ನಿರ್ಣಯವನ್ನು ಸದನವು ಕೈಗೊಂಡಿದೆ’ ಎಂದರು.
‘ಸಾರ್ವಜನಿಕರು ಸೇರಿದಂತೆ ಎಲ್ಲ ಸ್ತರಗಳ ಜನರಿಂದಲೂ ಸಲಹೆಗಳನ್ನು ಸಮಿತಿ ಪಡೆಯಲಿದೆ. ಈ ಸಮಿತಿಯ ವರದಿ ಆಧಾರದಲ್ಲಿ ನಿಯಮಾವಳಿಗಳಲ್ಲಿ ಬದಲಾವಣೆ ತರಲಾಗುವುದು’ ಎಂದು ಹೇಳಿದರು.
ಒಂದು ಮಸೂದೆ ವಿಧಾನ ಪರಿಷತ್ನಲ್ಲಿ ತಿರಸ್ಕೃತಗೊಂಡಿದೆ. ಎರಡು ಮಸೂದೆಗಳಿಗೆ ವಿಧಾನ ಪರಿಷತ್ ಅಂಗೀಕಾರ ಪಡೆಯುವುದು ಬಾಕಿ ಉಳಿದಿದೆ. 3,071 ಪ್ರಶ್ನೆಗಳ ಪೈಕಿ 1,109 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. 129 ಗಮನ ಸೆಳೆಯುವ ಸೂಚನೆಗಳ ಪೈಕಿ 9 ಸೂಚನೆಗಳ ಕುರಿತು ಚರ್ಚಿಸಲಾಗಿದೆ. 72 ಸೂಚನೆಗಳಿಗೆ ಉತ್ತರ ಸ್ವೀಕರಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.