ADVERTISEMENT

ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಕಲಾಪ‌ ಶುಕ್ರವಾರಕ್ಕೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 11:33 IST
Last Updated 4 ಮಾರ್ಚ್ 2021, 11:33 IST
   

ಬೆಂಗಳೂರು: 'ಒಂದು ದೇಶ- ಒಂದು ಚುನಾವಣೆ' ಕುರಿತು ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಸಬಾರದು ಎಂದು ವಿರೋಧ ಪಕ್ಷ ಕಾಂಗ್ರೆಸ್ ಧರಣಿ ಆರಂಭಿಸಿದೆ.ಧರಣಿ ಹಿಂಪಡೆಯುವಂತೆ ಸಭಾಪತಿ ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಹೀಗಾಗಿ, ಸಭಾಪತಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

'ಕಲಾಪ‌ ಸಲಹಾ ಸಮಿತಿಯ ಸಭೆಯಲ್ಲಿ ಚರ್ಚಿಸದೇ ವಿಷಯವನ್ನು ಚರ್ಚೆಗೆ ತರಲಾಗಿದೆ. ಚುನಾವಣಾ ಪದ್ಧತಿಯ ಬದಲಾವಣೆ ಆಗಬೇಕಾದರೆ ಸಂವಿಧಾನದ ತಿದ್ದುಪಡಿ ಅಗತ್ಯ. ಅಂತಹ ಅಧಿಕಾರ ವಿಧಾನ ಪರಿಷತ್ ಗೆ ಇಲ್ಲ.‌ ಆದ್ದರಿಂದ ಚರ್ಚೆಗೆ ಅವಕಾಶ ನೀಡಬಾರದು' ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಆಗ್ರಹಿಸಿದರು.

'ಇದು ಆರ್ ಎಸ್ ಎಸ್ ಕಾರ್ಯಸೂಚಿ. ಒಂದು ಪಕ್ಷ, ಸಂಘಟನೆಯ ಕಾರ್ಯಸೂಚಿ ಕುರಿತು ಈ ಸದನದಲ್ಲಿ ಚರ್ಚೆ ನಡೆಸಬಾರದು' ಎಂದು ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದರು.

ADVERTISEMENT

ಕಾಂಗ್ರೆಸ್ ನ ಪ್ರಕಾಶ್ ರಾಠೋಡ್, ಯು.ಬಿ. ವೆಂಕಟೇಶ್, ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ಜೆಡಿಎಸ್ ನ ಎಚ್.ಎಂ. ರಮೇಶ್ ಗೌಡ ಸೇರಿದಂತೆ ಹಲವರು ಚರ್ಚೆಗೆ ಅವಕಾಶ ನೀಡುವುದನ್ನು ವಿರೋಧಿಸಿದರು.

ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಶುಕ್ರವಾರ ಕಲಾಪ ಸಲಹಾ ಸಮಿತಿ ಸಭೆ ನಿಗದಿಯಾಗಿದ್ದು, ದಿನದ ಮಟ್ಟಿಗೆ ಚರ್ಚೆ ನಡೆಸುವಂತೆ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಿಸಿದರು.

ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಪೀಠದ ಎದುರು ಧರಣಿ ಆರಂಭಿಸಿದರು. ಅಲ್ಪಕಾಲ ಕಲಾಪ‌ ಮುಂದೂಡಿರುವ ಸಭಾಪತಿ, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಸಿದರು.

ಮತ್ತೆ ಕಲಾಪ‌ ಆರಂಭವಾದಾಗ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಧರಣಿ ಹಿಂಪಡೆಯುವಂತೆ ಸಭಾಪತಿ ಮನವಿ ಮಾಡಿದರೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ಹೀಗಾಗಿ, ಸಭಾಪತಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.