ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ವಿಧಾನ ಪರಿಷತ್ ಅಧಿವೇಶನದಲ್ಲಿ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿದರು. ಸಚಿವರಾದ ಝಮೀರ್ ಅಹ್ಮದ್ ಖಾನ್, ರಾಜಣ್ಣ ಮತ್ತು ಜಿ. ಪರಮೇಶ್ವರ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಎಲ್ಲ ಇ–ಪ್ಲಾಟ್ಫಾರ್ಮ್ಗಳಲ್ಲಿ ಮಾರಾಟವಾಗುವ ಕೃಷಿ ಉತ್ಪನ್ನಗಳ ಮೇಲೆ ಸೆಸ್ ವಿಧಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಮಸೂದೆಯೂ ಸೇರಿ ನಾಲ್ಕು ಮಸೂದೆಗಳಿಗೆ ವಿಧಾನ ಪರಿಷತ್ ಬುಧವಾರ ಅಂಗೀಕಾರ ನೀಡಿತು.
ಎಪಿಎಂಸಿ ತಿದ್ದುಪಡಿ ಮಸೂದೆ ಮಂಡಿಸಿದ ಸಚಿವ ಶಿವಾನಂದ ಪಾಟೀಲ, ‘ಪರವಾನಗಿ ಪಡೆಯದ ಹೊರತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರಕ್ಕಾಗಿ ಇ–ಫ್ಲಾಟ್ಫಾರ್ಮ್ ಸ್ಥಾಪನೆ ಮಾಡುವಂತಿಲ್ಲ. ಉದ್ದೇಶಪೂರ್ವಕ ತಪ್ಪು ಮಾಹಿತಿ ಅಥವಾ ವಂಚನೆ ಮೂಲಕ ಪರವಾನಗಿ ಪಡೆದಿದ್ದರೆ, ಪರವಾನಗಿದಾರರು ಷರತ್ತು ಉಲ್ಲಂಘಿಸಿದರೆ ಪರವಾನಗಿ ಅಮಾನತುಪಡಿಸುವ ಅಧಿಕಾರವನ್ನು ಮಾರುಕಟ್ಟೆ ನಿರ್ದೇಶಕರು ಹೊಂದಿರುತ್ತಾರೆ’ ಎಂದರು.
ಕರ್ನಾಟಕ ಗಿರವಿದಾರರ (ತಿದ್ದುಪಡಿ) ಮಸೂದೆ, ಲೇವಾದೇವಿದಾರರ (ತಿದ್ದುಪಡಿ) ಮಸೂದೆ, ಮಿತಿಮೀರಿದ ಬಡ್ಡಿ ವಿಧಿಸುವಿಕೆ ನಿಷೇಧ (ತಿದ್ದುಪಡಿ) ಮಸೂದೆಗಳನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಂಡಿಸಿದರು.
‘ಮಿತಿಮೀರಿದ ಬಡ್ಡಿ’ ಎಂದರೆ ಸರ್ಕಾರವೇ ಬಡ್ಡಿ ದರವನ್ನು ನಿರ್ಧರಿಸಲಿದೆಯೇ ಎಂಬ ವಿಪಕ್ಷ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ‘2013ರಲ್ಲಿ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಭದ್ರತೆ ನೀಡಿದ ಸಾಲಕ್ಕೆ ಶೇ 14, ಭದ್ರತೆ ಇಲ್ಲದ ಸಾಲಗಳಿಗೆ ಶೇ 16ರಷ್ಟು ಬಡ್ಡಿ ವಿಧಿಸಲು ಅವಕಾಶವಿದೆ. ಇದು ಜಾಸ್ತಿ. ಇದನ್ನು ಪರಿಷ್ಕರಿಸುವ ಅಗತ್ಯವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.