ADVERTISEMENT

ಮುಖ್ಯ ಕಾರ್ಯದರ್ಶಿ ಹುದ್ದೆಗೆ ತೆರೆ ಮರೆಯಲ್ಲಿ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 19:32 IST
Last Updated 18 ಡಿಸೆಂಬರ್ 2020, 19:32 IST
ರಾಜ್ಯ ಸರ್ಕಾರ
ರಾಜ್ಯ ಸರ್ಕಾರ   

ಬೆಂಗಳೂರು: ರಾಜ್ಯ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು ಇದೇ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಲಿದ್ದು, ಇದರಿಂದ ತೆರವಾಗಲಿರುವ ಹುದ್ದೆಗೆ ಹಿರಿಯ ಐಎಎಸ್‌ ಅಧಿಕಾರಿಗಳಲ್ಲೇ ಭಾರಿ ಪೈಪೋಟಿ ನಡೆದಿದೆ.

ಸೇವಾ ಅವಧಿ ಮುಂದುವರಿಸುವ ಸಾಧ್ಯತೆ ಇಲ್ಲದ ಕಾರಣ ವಿಜಯಭಾಸ್ಕರ್‌ ಹಿಂದಕ್ಕೆ ಸರಿದಿದ್ದಾರೆ. ಸೇವಾ ಜ್ಯೇಷ್ಠತೆಯಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ಮೊದಲನೆಯವರಾಗಿದ್ದರೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಎರಡನೇಯವರು.

ಈ ಮಧ್ಯೆ ವಂದಿತಾ ಶರ್ಮಾ ಹಾಗೂ ಐ.ಎಸ್‌.ಎನ್‌ ಪ್ರಸಾದ್‌ ಅವರ ಹೆಸರು ಮುಂಚೂಣಿಯಲ್ಲಿವೆ. ಪ್ರದೀಪ್‌ಸಿಂಗ್‌ ಖರೋಲ ಅವರು ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿರುವುದರಿಂದ ರಾಜ್ಯಕ್ಕೆ ಮರಳಿ ಬರುವ ಸಾಧ್ಯತೆ ಇಲ್ಲ. ಹೀಗಾಗಿ ವಂದಿತಾ ಶರ್ಮಾ ಹೆಸರು ಚಾಲ್ತಿಗೆ ಬಂದಿದೆ. ಪ್ರಸಾದ್‌ ಮತ್ತು ವಂದಿತಾ ದಂಪತಿ ಎಂಬುದು ವಿಶೇಷ.

ADVERTISEMENT

ಕೆಲವು ಬಾರಿ ಉನ್ನತ ಹುದ್ದೆಗಳಿಗೆ ಸೇವಾಜ್ಯೇಷ್ಠತೆ ಬದಿಗಿಟ್ಟು, ಮೂರು ಅಥವಾ ನಾಲ್ಕನೆಯವರನ್ನು ನೇಮಿಸಿರುವ ಉದಾಹರಣೆಗಳಿವೆ. ಅದೇ ರೀತಿಯಲ್ಲಿ ಈಗ ಪ್ರಯತ್ನಗಳು ಮುಂದುವರಿದಿವೆ. ರವಿಕುಮಾರ್ ಪರ ಒಂದಷ್ಟು ಅಧಿಕಾರಿಗಳು, ವಂದಿತಾ ಶರ್ಮಾ ಮತ್ತು ಪ್ರಸಾದ್‌ ಪರ ಇನ್ನೊಂದಷ್ಟು ಅಧಿಕಾರಿಗಳು ಲಾಬಿ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಹಿರಿತನದ ಪಟ್ಟಿಯಲ್ಲಿರುವ ಐಎಎಸ್‌ ಅಧಿಕಾರಿಗಳೆಂದರೆ ಪಿ.ರವಿಕುಮಾರ್‌, ವಂದಿತಾ ಶರ್ಮಾ, ಪ್ರದೀಪ್‌ ಸಿಂಗ್‌ ಖರೋಲ, ಐ.ಎಸ್‌.ಎನ್‌ ಪ್ರಸಾದ್‌, ಮಹೇಂದ್ರ ಜೈನ್‌, ರಜನೀಶ್ ಗೋಯೆಲ್‌. ಹಿರಿತನವನ್ನೇ ಪರಿಗಣಿಸಿದರೆ ಪಿ.ರವಿಕುಮಾರ್‌ ಅವರಿಗೆ ಅವಕಾಶಗಳು ಹೆಚ್ಚು. ಅಲ್ಲದೆ, ಈಗ ಮುಖ್ಯಮಂತ್ರಿಯವರ ಆಪ್ತ ಅಧಿಕಾರಿಗಳ ತಂಡದ ಪ್ರಮುಖರೂ ಆಗಿರುವುದರಿಂದ ಇವರಿಗೆ ಅವಕಾಶಗಳು ಹೆಚ್ಚು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.