ADVERTISEMENT

ಕೈಗಾರಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 21:39 IST
Last Updated 14 ಜುಲೈ 2020, 21:39 IST

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮತ್ತು ನೆರೆಯ ಜಿಲ್ಲೆಗಳಲ್ಲಿ ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆಗಳಲ್ಲಿ ಕೈಗಾರಿಕಾ ಘಟಕಗಳಿಗೆ ಕಾರ್ಯ ನಿರ್ವಹಿಸಲು ರಾಜ್ಯ ಸರ್ಕಾರ ಅವಕಾಶ ನೀಡಿದೆ.

ಹೊಸ ಆದೇಶದಂತೆ ಬಹುತೇಕ ಎಲ್ಲ ಉದ್ಯಮಗಳಿಗೂ ಕಾರ್ಯಾಚರಣೆ ನಡೆಸಲು ಅವಕಾಶ ನೀಡಲಾಗಿದೆ.

ವಾಣಿಜ್ಯೋದ್ಯಮಿಗಳ ಮನವಿಯ ಮೇರೆಗೆ ವಾಣಿಜ್ಯ ಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಆದೇಶ ಹೊರಡಿಸಿದ್ದು, 28 ಬಗೆಯ ಅಗತ್ಯ ಉತ್ಪಾದನಾ ಕೈಗಾರಿಕೆಗಳು ಮತ್ತು 8 ಬಗೆಯ ನಿರಂತರ ಪ್ರಕ್ರಿಯೆ ನಡೆಸುವ ಉದ್ಯಮಗಳು ಲಾಕ್‌ಡೌನ್‌ ಇರುವ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ಉಕ್ಕು ಘಟಕಗಳು, ಪೆಟ್ರೋಲಿಯಂ ರಿಫೈನರಿ, ಸಿಮೆಂಟ್‌, ರಸಗೊಬ್ಬರ, ಗಾಜು ತಯಾರಿಕೆ ಮತ್ತು ಜವಳಿ ಘಟಕಗಳು ಪ್ರಮುಖವಾದವು.

ADVERTISEMENT

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ನೆರೆಯ ಜಿಲ್ಲೆಗಳಾದ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲೂ ಕೈಗಾರಿಕಾ ಚಟುವಟಿಕೆಗಳನ್ನು ನಡೆಬಹುದು.

ಕಾರ್ಮಿಕರು ಮತ್ತು ಸಿಬ್ಬಂದಿ ಓಡಾಟಕ್ಕೆ ತಮ್ಮ ಕೈಗಾರಿಕಾ ಘಟಕಗಳು ನೀಡಿರುವ ಗುರುತಿನ ಚೀಟಿ ಬಳಸಬಹುದು ಎಂದು ಆದೇಶ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.