ADVERTISEMENT

ಕೋವಿಡ್‌ ಪರಿಸ್ಥಿತಿ ಹತೋಟಿಗೆ ಲಾಕ್‌ಡೌನ್‌: ಕೇಂದ್ರ ಸಚಿವ ಸದಾನಂದಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಮೇ 2021, 10:18 IST
Last Updated 6 ಮೇ 2021, 10:18 IST
ಸದಾನಂದಗೌಡ
ಸದಾನಂದಗೌಡ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗಿರುವ ಕಾರಣ ಸಂಪೂರ್ಣ ಲಾಕ್‌ಡೌನ್‌ ಮಾಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಪರಿಸ್ಥಿತಿ ಕೈಮೀರುತ್ತಿರುವುದರಿಂದ ಮೊದಲು ಜೀವ ಉಳಿಸುವ ಕೆಲಸ ಆಗಬೇಕು. ಅದಕ್ಕಾಗಿ ಲಾಕ್‌ಡೌನ್‌ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂಬೈನಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಿದ್ದರಿಂದ ಅಲ್ಲಿ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದೆ. ಪ್ರಧಾನಮಂತ್ರಿಯವರು ಲಾಕ್‌ಡೌನ್‌ ಮಾಡುವ ಅಧಿಕಾರವನ್ನು ರಾಜ್ಯಗಳಿಗೇ ನೀಡಿದ್ದಾರೆ. ಸುಪ್ರೀಂಕೋರ್ಟ್‌ ಕೂಡ ಲಾಕ್‌ಡೌನ್‌ ಮಾಡುವಂತೆ ಸೂಚಿಸಿದೆ. ಪರಿಸ್ಥಿತಿಯ ಗಂಭೀರತೆ ನೋಡಿಕೊಂಡು ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಲಾಕ್‌ಡೌನ್‌ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸದಾನಂದಗೌಡ ಹೇಳಿದರು.

ADVERTISEMENT

ಬೆಂಗಳೂರಿನಲ್ಲಿ ಕರ್ಫ್ಯೂ ವಿಧಿಸಿದ್ದರಿಂದ ಜನ ಗ್ರಾಮೀಣ ಪ್ರದೇಶಗಳತ್ತ ಹೋದರು. ಇದರಿಂದ ಅಲ್ಲಿ ಕೊರೊನಾ ಹರಡಲು ಕಾರಣವಾಯಿತು ಎಂದರು.

ಸಿದ್ದರಾಮಯ್ಯ ಮಾನಸಿಕ ರೋಗಿಯಾ?

ಪ್ರತಿ ನಿತ್ಯ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಸಿದ್ದರಾಮಯ್ಯ ಕೋವಿಡ್ ರೋಗಿ ಆಗಿದ್ದರಾ ಅಥವಾ ಮಾನಸಿಕ ರೋಗಿಯಾಗಿದ್ದರಾ ಎಂದು ಸದಾನಂದಗೌಡ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಕ್ಕೆ ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ಗೆ ಪೂರೈಕೆ ಮಾಡುತ್ತಿದೆ. ಯಾರು ಏನೇ ಹೇಳಲಿ ಕೋವಿಡ್‌ ಕರ್ತವ್ಯ ದೇವರ ಕೆಲಸ ಎಂದುಕೊಂಡು ಕೆಲಸ ಮಾಡುತ್ತಿದ್ದೇವೆ. ಮೊದಲು ರೆಮ್‌ಡಿಸಿವಿರ್‌ ಉತ್ಪಾದನೆಯೇ ಇರಲಿಲ್ಲ. ಅದನ್ನು ಆರಂಭಿಸಿದೆವು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.