ADVERTISEMENT

ಲೋಕಾಯುಕ್ತ ಪೊಲೀಸರ ದಾಳಿ ವೇಳೆ ₹50 ಸಾವಿರ ಸುಟ್ಟು ಹಾಕಿದ ಪ.ಪಂ ಸದಸ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 14:16 IST
Last Updated 21 ನವೆಂಬರ್ 2022, 14:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶಿವಮೊಗ್ಗ: ಸಾಗರ ತಾಲ್ಲೂಕಿನ ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಸಿ.ಹರೀಶ್, ಕೋಳಿ ಮಾರಾಟ ಅಂಗಡಿ ತೆರೆಯಲು ಲೈಸೆನ್ಸ್ ಕೊಡಿಸಲು ತಾವು ಪಡೆದಿದ್ದ ಲಂಚದ ಹಣವನ್ನು ಸೋಮವಾರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ ವೇಳೆ ಗ್ಯಾಸ್ ಸ್ಟೋವ್ ಮೇಲಿಟ್ಟು ಸುಟ್ಟು ಹಾಕಿದ್ದಾರೆ.

ಜೋಗ್ ಫಾಲ್ಸ್ ನಲ್ಲಿ ವಾಸವಿರುವ ಕೆ.ಅಹಮದ್ ಅಬ್ದುಲ್ ಅವರು ಕೋಳಿ ಮಾಂಸ ಮಾರಾಟ ಅಂಗಡಿ ತೆರೆಯಲು ವ್ಯಾಪಾರ ಪರವಾನಗಿಗಾಗಿ (ಟ್ರೇಡ್ ಲೈಸೆನ್ಸ್) ಪಟ್ಟಣ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರು.

ಪಟ್ಟಣ ಪಂಚಾಯ್ತಿಯಿಂದ ಪರವಾನಗಿ ಕೊಡಿಸಲು ಸದಸ್ಯ ಹರೀಶ್ ₹ 50 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. ಆ ಬಗ್ಗೆ ಅಹಮದ್ ಅಬ್ದುಲ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಲಂಚದ ಮೊತ್ತವನ್ನು ಕೊಡಲು ಹರೀಶ್ ಸೂಚನೆಯಂತೆ ಅವರ ಮನೆಗೆ ಅಹಮದ್ ತೆರಳಿದ್ದರು. ಹರೀಶ್ ಹಣ ಪಡೆಯುತ್ತಿದ್ದಂತೆಯೇ ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ ನೇತೃತ್ವದ ತಂಡ ಮನೆಗೆ ದಾಳಿ ನಡೆಸಿದೆ. ಅದನ್ನು ಗಮನಿಸಿದ ಹರೀಶ್ ತಮ್ಮ ಬಳಿ ಇದ್ದ ಲಂಚದ ಹಣವನ್ನು ಸ್ಟೋವ್ ಮೇಲೆ ಇಟ್ಟು ಸುಟ್ಟು ಹಾಕಿದ್ದಾರೆ ಎಂದು ತಿಳಿದುಬಂದಿದೆ.

'ಲಂಚಕ್ಕೆ ಬೇಡಿಕೆ, ಸ್ವೀಕಾರ ಹಾಗೂ ಸಾಕ್ಷ್ಯ ನಾಶದ ಆರೋಪದ ಮೇಲೆ ಕೆ.ಸಿ.ಹರೀಶ ಅವರನ್ನು ಬಂಧಿಸಿದ್ದೇವೆ. ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದೇವೆ' ಎಂದು ಲೋಕಾಯುಕ್ತ ಡಿವೈಎಸ್ಪಿ ಎನ್.ಮೃತ್ಯುಂಜಯ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.