ADVERTISEMENT

‘ಲೋಕಾ’ ಹೆಚ್ಚುವರಿ ಹುದ್ದೆಗೆ ಸಿಗದ ಅನುಮತಿ: ಬಾಕಿ ಉಳಿದ ಪ್ರಸ್ತಾವಗಳು

ಆರ್ಥಿಕ ಇಲಾಖೆಯಲ್ಲಿಯೇ ಬಾಕಿ ಉಳಿದ ಪ್ರಸ್ತಾವಗಳು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 14:43 IST
Last Updated 12 ನವೆಂಬರ್ 2025, 14:43 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಹೆಚ್ಚುವರಿ ಹುದ್ದೆ ಮಂಜೂರಾತಿ, ಭತ್ಯೆ ಹೆಚ್ಚಳ ಕೋರಿ ಲೋಕಾಯುಕ್ತ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಹಲವು ಪ್ರಸ್ತಾವಗಳು ಆರ್ಥಿಕ ಇಲಾಖೆ ಬಳಿ ಬಾಕಿ ಉಳಿದಿವೆ. ಇದರಿಂದ ಲೋಕಾಯುಕ್ತ ಸಂಸ್ಥೆಯ ಕಾರ್ಯನಿರ್ವಹಣೆಗೆ ತೊಡಕಾಗಿದೆ.

ADVERTISEMENT

ಈ ಪೈಕಿ ಕೆಲವು ಪ್ರಸ್ತಾವಗಳನ್ನು 2018–19ರಲ್ಲಿಯೇ ಸಲ್ಲಿಸಲಾಗಿತ್ತು. ಲೋಕಾಯುಕ್ತ ಸಂಸ್ಥೆ ಮತ್ತು ಆರ್ಥಿಕ ಇಲಾಖೆ ಮಧ್ಯೆ ಹಲವು ಬಾರಿ ಪತ್ರ ವ್ಯವಹಾರಗಳು ನಡೆದಿವೆ. ಆದರೆ ಪ್ರಸ್ತಾವಗಳಿಗೆ ಈವರೆಗೂ ಅನುಮೋದನೆ ಸಿಕ್ಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ, ಲೋಕಾಯುಕ್ತವು ಆರ್ಥಿಕ ಇಲಾಖೆಗೆ ಪತ್ರ ಬರೆದಿದೆ.

ಲೋಕಾಯುಕ್ತ ಸಂಸ್ಥೆಯು 339 ಹೆಚ್ಚುವರಿ ಹುದ್ದೆಗಳನ್ನು ಕೋರಿ 2024ರಲ್ಲಿ ಪ್ರಸ್ತಾವ ಸಲ್ಲಿಸಿರುತ್ತದೆ. ಆರ್ಥಿಕ ಇಲಾಖೆಯು ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದು ತಿಳಿಸಿರುತ್ತದೆ. ಯಾವ ಮಾಹಿತಿ ಬೇಕು ಎಂಬ ವಿವರವನ್ನು ನೀಡಿ ಎಂದು ಆರ್ಥಿಕ ಇಲಾಖೆಗೆ ಲೋಕಾಯುಕ್ತವು ಅಕ್ಟೋಬರ್ 10ರಂದು ಪತ್ರ ಬರೆದಿದೆ. ಆ ಪತ್ರಕ್ಕೆ ಈವರೆಗೆ ಪ್ರತಿಕ್ರಿಯೆ ಬಂದಿರುವುದಿಲ್ಲ.

ಲೋಕಾಯುಕ್ತದಲ್ಲಿ ಗ್ರೂಪ್‌–ಸಿ ವೃಂದದಲ್ಲಿನ ಉಳಿಕೆ ಮೂಲ ವೃಂದದ 64 ಮತ್ತು ಕಲ್ಯಾಣ ಕರ್ನಾಟಕ ವೃಂದದ 4 ಹುದ್ದೆಗಳು ನೇಮಕಾತಿಗೆ ಬಾಕಿ ಇರುತ್ತವೆ. ಆರ್ಥಿಕ ಮಿತವ್ಯಯ ಸಡಿಲಿಸಿ, ಈ ಹುದ್ದೆಗಳ ನೇರ ನೇಮಕಾತಿಗೆ ಅನುಮತಿ ನೀಡಿ ಎಂದು ಪ್ರಸ್ತಾವ ಸಲ್ಲಿಸಿ ಹಲವು ತಿಂಗಳು ಕಳೆದಿವೆ. ಆರ್ಥಿಕ ಇಲಾಖೆಯು ಈವರೆಗೆ ಅನುಮತಿ ನೀಡಿಲ್ಲ.

‘ಲೋಕಾಯುಕ್ತ ಸಂಸ್ಥೆಯು ಸಾವಿರಾರು ಪ್ರಕರಣಗಳನ್ನು ನಿರ್ವಹಿಸುತ್ತಿದೆ. ಸಿಬ್ಬಂದಿ ಕೊರತೆಯಿಂದ ಕಾರ್ಯನಿರ್ವಹಣೆ ಕಷ್ಟವಾಗಿದೆ. ಸಿಬ್ಬಂದಿಯೇ ಇಲ್ಲದೆ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಹೇಗೆ’ ಎಂದು ಲೋಕಾಯುಕ್ತದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

22 ಹೊಸ ವಾಹನಗಳ ಖರೀದಿಗೆ ಪ್ರಸ್ತಾವ

*5 ತೀರ್ಪು ಬರಹಗಾರರನ್ನು ಸಂಚಿತ ವೇತನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮಂಜೂರಾತಿ ಕೋರಿ ಸಲ್ಲಿಸಿದ ಪ್ರಸ್ತಾವ

*ಲೋಕಾಯುಕ್ತ ಅಧಿಕಾರಿಗಳ ಉಪಯೋಗಕ್ಕಾಗಿ 22 ಹೊಸ ವಾಹನಗಳ ಖರೀದಿಗೆ ₹2.12 ಕೋಟಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಸಹಮತಿ/ಅಭಿಪ್ರಾಯ ಕೋರಿ ಸಲ್ಲಿಸಲಾದ ಕಡತ

*ಲೋಕಾಯುಕ್ತ ಸಂಸ್ಥೆಯ ಸಹಾಯಕ ಗ್ರಂಥಪಾಲಕರಿಗೆ ಕನಿಷ್ಠ ಮೂಲ ವೇತನವನ್ನು, 2024ರ ಪರಿಷ್ಕೃತ ವೇತನ ಶ್ರೇಣಿಯ ಆಧಾರದಲ್ಲಿ ₹49,050ಕ್ಕೆ ಹೆಚ್ಚಿಸುವ ಪ್ರಸ್ತಾವ

*ಹಿಂದಿನ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ, ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಒದಗಿಸುತ್ತಿರುವ ಗೃಹ ಪರಿಚಾರಕ, ವಾಹನ ಚಾಲಕ ಮತ್ತು ತೀರ್ಪು ಬರಹಗಾರರ ವೇತನವನ್ನು ₹70,000ದಿಂದ ₹1.22 ಲಕ್ಷಕ್ಕೆ ಹೆಚ್ಚಿಸುವಂತೆ ಕೋರಿದ ಪ್ರಸ್ತಾವ

ಆಂತರಿಕ ನಿಗಾ ಘಟಕಕ್ಕೆ ಗ್ರಹಣ

ಲೋಕಾಯುಕ್ತ ಪೊಲೀಸರ ದಾಳಿ ಕಾರ್ಯಾಚರಣೆಗಳ ಮಾಹಿತಿ ಸೋರಿಕೆಯಾದ ಹಾಗೂ ಸಂಸ್ಥೆಯ ಸಿಬ್ಬಂದಿ ವಿರುದ್ಧವೇ ಭ್ರಷ್ಟಾಚಾರ ಆರೋಪ ಬಂದ ಕಾರಣ, ಆಂತರಿಕ ನಿಗಾ ಘಟಕ ಸ್ಥಾಪನೆಗೆ ಲೋಕಾಯುಕ್ತವು ನಿರ್ಧರಿಸಿತ್ತು. ಆದರೆ ಈವರೆಗೆ ಈ ಘಟಕವು ಅಸ್ತಿತ್ವಕ್ಕೆ ಬಂದಿಲ್ಲ.

ಇಂತಹ ಘಟಕ ಒಂದರ ಅಗತ್ಯವಿದೆ ಎಂದು 2025ರ ಮಾರ್ಚ್‌ 12ರಂದು  ಲೋಕಾಯುಕ್ತವು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಈ ಹಿಂದಿನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಸಿಬ್ಬಂದಿಯನ್ನೇ ಬಳಸಿಕೊಂಡು ಆಂತರಿಕ ನಿಗಾ ಘಟಕ ರಚಿಸಿ ಎಂದು ಇಲಾಖೆಯು ಜೂನ್‌ 6ರಂದು ತಿಳಿಸಿತ್ತು. ಎಸಿಬಿ ಸಿಬ್ಬಂದಿಯ ಹೊರತಾಗಿಯೂ ಎಂಟು ಹುದ್ದೆಗಳನ್ನು ಸೃಜಿಸಿ ಎಂದು ಲೋಕಾಯುಕ್ತವು ಜೂನ್‌ 27ರಂದು ಆರ್ಥಿಕ ಇಲಾಖೆಗೆ ಮತ್ತೆ ಪ್ರಸ್ತಾವ ಸಲ್ಲಿಸಿತ್ತು. ಈ ‍ಪ್ರಸ್ತಾವವೂ ಇಲಾಖೆಯಲ್ಲಿ ಬಾಕಿಯಾಗಿದೆ.

ಈ ಮಧ್ಯೆ ಹಿಂದಿನ ವಾರ ಬೆಂಗಳೂರು ವ್ಯಾಪ್ತಿಯ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್‌ಟಿಒ) ಮೇಲೆ ನಡೆದ ದಾಳಿಯ ಮಾಹಿತಿ ಸೋರಿಕೆಯಾಗಿರಬಹುದು ಎಂದು ಲೋಕಾ ಅಧಿಕಾರಿಗಳೇ ಶಂಕೆ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.