ADVERTISEMENT

ಲೋಕಸಭೆ ಸೀಟು ಹಂಚಿಕೆ: ಮೈಸೂರು ಬಿಟ್ಟುಕೊಡದ ಸಿದ್ದು–ತುಮಕೂರು ಕಳೆದುಕೊಂಡ ಪರಂ!

ಕಾಂಗ್ರೆಸ್‌ಗೆ–20; ಜೆಡಿಎಸ್‌ಗೆ–8

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 20:31 IST
Last Updated 13 ಮಾರ್ಚ್ 2019, 20:31 IST
   

ಬೆಂಗಳೂರು: ಹಲವು ಸುತ್ತಿನ ಹಗ್ಗ ಜಗ್ಗಾಟಗಳ ಬಳಿಕ ಜೆಡಿಎಸ್‌– ಕಾಂಗ್ರೆಸ್‌ ಮಧ್ಯೆಲೋಕಸಭೆ ಕ್ಷೇತ್ರ ಹಂಚಿಕೆ ಗೊಂದಲಕ್ಕೆಕೊನೆಗೂ ತೆರೆಬಿದ್ದಿದೆ. 28 ಕ್ಷೇತ್ರಗಳ ಪೈಕಿ ಪಕ್ಷದ ಸಂಸದರಿರುವ ಒಂದು ಕ್ಷೇತ್ರ ಸಹಿತ ಎಂಟು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ಒಪ್ಪಿದೆ.

ಮೈಸೂರು ಕ್ಷೇತ್ರವನ್ನು ‘ಕೈ’ಯಲ್ಲೇ ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಯಶಸ್ವಿಯಾದರೆ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿರುವ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಕ್ಷೇತ್ರಹಂಚಿಕೆಯ ಗುದ್ದಾಟದಲ್ಲಿ ಸಿದ್ದರಾಮಯ್ಯ ಗೆದ್ದಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಮಧ್ಯೆ ಕೊಚ್ಚಿಯಲ್ಲಿ ಬುಧವಾರ ಸಂಜೆ ನಡೆದ ಮಾತುಕತೆಯಲ್ಲಿ ಈ ತೀರ್ಮಾನವಾಗಿದೆ.

ADVERTISEMENT

ಆರಂಭದಲ್ಲಿ 12 ಕ್ಷೇತ್ರಗಳಿಗೆ ಬೇಡಿಕೆಇಟ್ಟಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು, ಕೊನೆಗೆ ‘ಮೈತ್ರಿ’ (3:1) ಸೂತ್ರದಂತೆ 10 ಕ್ಷೇತ್ರಗಳನ್ನುಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದರು ಆದರೆ, ಹಾಲಿ ಪಕ್ಷದ ಸಂಸದರಿರುವ 10 ಕ್ಷೇತ್ರಗಳನ್ನು ಬಿಟ್ಟು ಕೊಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ವಾದಿಸಿದ್ದರು.

ಮೈಸೂರು ಮತ್ತು ತುಮಕೂರು ಕ್ಷೇತ್ರಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ಉಭಯ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಮೈಸೂರು ಕ್ಷೇತ್ದರ ವಸ್ತುಸ್ಥಿತಿಯನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಿದ್ದರಾಮಯ್ಯ ಕೊನೆಗೂ ಯಶಸ್ವಿಯಾಗಿದ್ದಾರೆ.

ನಿಖಿಲ್‌–ಪ್ರಜ್ವಲ್‌ ಸ್ಪರ್ಧೆ ಪಕ್ಕಾ
ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ಮಂಡ್ಯದಿಂದ ಹಾಗೂಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್‌ ಹಾಸನದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಎಚ್‌.ಡಿ. ದೇವೇಗೌಡ ಪ್ರಕಟಿಸಿದ್ದಾರೆ.

ದೇವೇಗೌಡರ ಇಬ್ಬರು ಮಕ್ಕಳು ರಾಜ್ಯ ಸರ್ಕಾರದ ನೇತೃತ್ವ ವಹಿಸಿದ್ದು, ಲೋಕಸಭೆ ಚುನಾವಣೆ ಮೂಲಕ ಅವರ ಮೂರನೇ ತಲೆಮಾರು ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡಿದಂತಾಗುತ್ತದೆ.

ದೇವೇಗೌಡರ ಸ್ಪರ್ಧೆ ಎಲ್ಲಿಂದ?
ಇನ್ನೂ ಗುಟ್ಟು ಬಿಟ್ಟುಕೊಡದ ದೇವೇಗೌಡರು, ತುಮಕೂರು ಅಥವಾ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯುವ ಚಿಂತನೆಯಲ್ಲಿದ್ದಾರೆ. ತುಮಕೂರಿನಿಂದ ಮಾಜಿ ಶಾಸಕ ಸುರೇಶ್ ಬಾಬು ಕಣಕ್ಕಿಳಿಯುವ ಸಾಧ್ಯತೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.