ADVERTISEMENT

ಮದುವೆಗಾಗಿ ಮತಾಂತರ ತಡೆ ಕಾನೂನು ಬಗ್ಗೆ ತಜ್ಞರ ಸಲಹೆ ಪಡೆದು ಮುಂದಿನ ಕ್ರಮ: ಸಚಿವ

ಮದುವೆಗಾಗಿ ಮತಾಂತರ ತಡೆಗೆ ಕಾನೂನು: ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 17:47 IST
Last Updated 4 ನವೆಂಬರ್ 2020, 17:47 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮದುವೆಗಾಗಿ ಮತಾಂತರ ಸೇರಿದಂತೆ ‘ಲವ್‌ ಜಿಹಾದ್‌’ ಹೆಸರಿನಲ್ಲಿ ನಡೆಯುವ ಮತಾಂತರಗಳನ್ನು ತಡೆಯಲು ಹೊಸ ಕಾನೂನು ರೂಪಿಸುವ ಕುರಿತು ತಜ್ಞರ ಸಲಹೆ ಆಧರಿಸಿ ರಾಜ್ಯ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಪ್ರತಿಕ್ರಿಯಿಸಿದ ಅವರು, ‘ಕೆಲವು ಶಕ್ತಿ ಗಳು ಯುವಜನರನ್ನು ದಿಕ್ಕು ತಪ್ಪಿಸಿ ಮತಾಂತರ ಮಾಡುತ್ತಿವೆ. ಅಲಹ ಬಾದ್‌ ಹೈಕೋರ್ಟ್‌ ತೀರ್ಪಿನ ಬಳಿಕ ಬಲವಂತದ ಮತ್ತು ಮದುವೆಯ ಆಮಿಷವೊಡ್ಡಿ ನಡೆಸುವ ಮತಾಂತರ ತಡೆಗೆ ಹೊಸ ಕಾನೂನು ರಚನೆ ಕುರಿತು ಚರ್ಚೆ ಆರಂಭವಾಗಿದೆ. ಈಗ ಇರುವ ಕಾನೂನುಗಳ ಜತೆಗೆ ವಿಶೇಷ ಕಾನೂನು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗು
ತ್ತಿದೆ’ ಎಂದರು.

‘ಹೊಸ ಕಾನೂನು ತರುವುದಾಗಿ ಕೆಲವು ರಾಜ್ಯಗಳು ಈಗಾಗಲೇ ಘೋಷಣೆ ಮಾಡಿವೆ. ಸಂವಿಧಾನದ ಚೌಕಟ್ಟಿನಲ್ಲೇ ಹೊಸ ಕಾಯ್ದೆ ರೂಪಿಸಬೇಕು ಎಂಬುದು ಸರ್ಕಾರದ ಚಿಂತನೆ. ಇತರ ರಾಜ್ಯಗಳು ಯಾವ ರೀತಿ ಮುಂದುವರಿಯುತ್ತವೆ ಎಂಬುದನ್ನು ಗಮನಿಸುತ್ತಿದ್ದೇವೆ. ತಜ್ಞರ ಜತೆಗೂ ಚರ್ಚಿಸಿ ಸಲಹೆ ಪಡೆಯುತ್ತೇವೆ. ಆ ಬಳಿಕವೇ ಮುಂದಿನ ಹೆಜ್ಜೆ ಇಡಲಾಗುವುದು’ ಎಂದರು.

ADVERTISEMENT

ಭಯೋತ್ಪಾದನೆಯ ಮತ್ತೊಂದು ಮುಖ

‘ಲವ್‌ ಜಿಹಾದ್‌ ಭಯೋತ್ಪಾದನೆಯ ಮತ್ತೊಂದು ಮುಖ. ಅದರ ಹೆಸರಿನಲ್ಲಿ ಮತಾಂತರ ನಡೆಯುತ್ತಿದೆ. ಇದು ದೇಶದಲ್ಲಿ ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವ ವ್ಯವಸ್ಥಿತ ಷಡ್ಯಂತ್ರ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

ಚಿಕ್ಕಮಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಕರಾವಳಿ ಸಹಿತ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂಥ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ, ಲವ್‌ ಜಿಹಾದ್‌ ತಡೆ, ಮತಾಂತರ ನಿಷೇಧ ಕಾಯ್ದೆ ತರುವ ಅಗತ್ಯ ಇದೆ ಎಂದರು.

‘ಮತಾಂಧತೆ ರಕ್ತಗತ’

ಮಡಿಕೇರಿ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದಲ್ಲಿ ಟಿಪ್ಪು ಜಯಂತಿ ರದ್ದುಪಡಿಸಿರುವಂತೆಯೇ, ಲವ್ ಜಿಹಾದ್‌ ಮಟ್ಟ ಹಾಕಲೂ ಕಠಿಣ ಕಾನೂನು ರೂಪಿಸಲಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ಬುಧವಾರ ಇಲ್ಲಿ ಹೇಳಿದರು.

‘ಪ್ರೀತಿಸುವ ವೇಳೆ ಅಡ್ಡ ಬಾರದ ಧರ್ಮ, ಮದುವೆ ಯಾಗುವ ವೇಳೆ ಅಡ್ಡ ಬರು ವುದೇಕೆ? ಮದುವೆಯಾಗಲು ಮತಾಂತರ ಆಗುವುದು ಕಡ್ಡಾಯ ಎನ್ನುವವರು ನಿಜವಾಗಿಯೂ ಧರ್ಮಾಂಧರು. ಕೆಲವರಲ್ಲಿ ರಕ್ತಗತವಾಗಿಯೇ ಮತಾಂಧತೆ ಅಡಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.