ಬೆಂಗಳೂರು: ಮಾಜಿ ಶಾಸಕರೂ ಆಗಿರುವ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರುವಾರ ಭೇಟಿಮಾಡಿ ಕೆಲಕಾಲ ಚರ್ಚೆ ನಡೆಸಿದರು.
ಸದಾಶಿವನಗರದಲ್ಲಿರುವ ಶಿವಕುಮಾರ್ ಅವರ ಮನೆಯಲ್ಲೇ ಭೇಟಿ ನಡೆದಿದೆ. ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿಗದಿಗಾಗಿ ಭೇಟಿ ನಡೆದಿದೆ ಎಂಬ ಸುದ್ದಿಹಬ್ಬಿತ್ತು. ಆದರೆ, ಮಧು ಬಂಗಾರಪ್ಪ ಅವರು ಇದನ್ನು ನಿರಾಕರಿಸಿದ್ದು, ಎಂದಿನಂತೆ ಶಿವಕುಮಾರ್ ಅವರ ಜತೆಗಿನ ಸೌಹಾರ್ದ ಭೇಟಿಯಷ್ಟೆ ಎಂದು ತಿಳಿಸಿದ್ದಾರೆ.
‘ಶಿವಕುಮಾರ್ ಅವರು ದೀರ್ಘ ಕಾಲದಿಂದ ನಮ್ಮ ಕುಟುಂಬದ ಆಪ್ತರು. ಆಗಾಗ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಗುರುವಾರ ಕೂಡ ಅದೇ ರೀತಿ ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ಸೇರ್ಪಡೆ ಸೇರಿದಂತೆ ಯಾವುದೇ ರೀತಿಯ ರಾಜಕೀಯ ಚರ್ಚೆಯೂ ನಮ್ಮ ನಡುವೆ ನಡೆದಿಲ್ಲ’ ಎಂದು ಮಧು ಬಂಗಾರಪ್ಪ ತಿಳಿಸಿದರು.
‘ರಾಜಕೀಯ ತೀರ್ಮಾನ ಕೈಗೊಳ್ಳುವ ಮುನ್ನ ಪ್ರಮುಖರ ಜತೆ ಸಮಾಲೋಚಿಸಲಾಗುವುದು. ಯಾವುದೇ ವಿಷಯ ಇದ್ದರೂ ಬಹಿರಂಗವಾಗಿ ಪ್ರಕಟಿಸಿದ ಬಳಿಕವೇ ಮುಂದಿನ ಹೆಜ್ಜೆ ಇಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.