ಬೆಂಗಳೂರು: ಆನೆಗೊಂದಿಯ ನವಬೃಂದಾವನ ನಡುಗಡ್ಡೆಯಲ್ಲಿ ವ್ಯಾಸರಾಯರ ಬೃಂದಾವನವನ್ನು ಧ್ವಂಸ ಮಾಡಿರುವ ದುಷ್ಕರ್ಮಿಗಳನ್ನು ಪತ್ತೆ ಹೆಚ್ಚಿ ಶಿಸ್ತುಕ್ರಮ ಜರುಗಿಸಬೇಕು ಎಂದು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಒತ್ತಾಯಿಸಿದೆ.
ನಗರದ ಗಾಂಧಿ ಬಜಾರ್ನಲ್ಲಿರುವ ವ್ಯಾಸರಾಯರ ಮಠದ ಎದುರು ಭಕ್ತರು ಕೆಲ ಸಮಯಮೌನ ಪ್ರತಿಭಟನೆ ನಡೆಸಿದರು.
‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಹಾಸಭಾದ ಖಜಾಂಚಿ ಕೆ.ವಿ.ರಾಮಚಂದ್ರ, ‘ವ್ಯಾಸರಾಯರ ಬೃಂದಾವನ ಹಾಳು ಮಾಡಿರುವ ವಿಷಯ ತಿಳಿದ ಮಾಧ್ವ ಸಮಾಜ ದಿಗ್ಭ್ರಮೆಗೊಂಡಿದೆ. ಆಕ್ರೋಶ ಮಡುಗಟ್ಟಿದೆ. ಇದು ಹಿಂದೂ ಸಮಾಜಕ್ಕೆ ಖೇದ ಉಂಟು ಮಾಡುವ ಸಂಗತಿ’ ಎಂದು ಹೇಳಿದರು.
‘ವ್ಯಾಸರಾಜ ಮಠ, ರಾಘವೇಂದ್ರ ಮಠ, ಪೇಜಾವರ ಮಠ ಮತ್ತುಉತ್ತರಾದಿ ಮಠದ ಸ್ವಾಮಿಗಳು ಆನೆಗೊಂದಿಗೆ ತೆರಳುತ್ತಿದ್ದಾರೆ. ಸಂಜೆ ಅಲ್ಲಿಯೂ ಪ್ರತಿಭಟನೆ ನಡೆಸಲಾಗುವುದು. ನವಬೃಂದಾವನದ ಸ್ಥಳದ ಬಗ್ಗೆ ಉತ್ತರಾದಿ ಮಠ ಮತ್ತು ರಾಘವೇಂದ್ರ ಸ್ವಾಮಿಗಳ ಮಠಗಳ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ. ಆದರೆ ಎಲ್ಲರೂ ವ್ಯಾಸರಾಜರ ಭಕ್ತರು. ಯಾವುದೇ ಮಠಕ್ಕೆ ಸೇರಿದವರು ಈ ಕೆಲಸ ಮಾಡಿಲ್ಲ. ಇದು ಕಿಡಿಗೇಡಿಗಳ ಕೃತ್ಯ. ಅಪರಾಧಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ವ್ಯಾಸರಾಜರು ವಿಜಯನಗರದ ರಾಜಗುರುಗಳಾಗಿದ್ದವರು. ಇದು ಕೃಷ್ಣದೇವರಾಯನೇ ಮುಂದೆ ನಿಂತು ಕಟ್ಟಿಸಿದ ಬೃಂದಾವನ ಎಂಬ ಪ್ರತೀತಿಯಿದೆ. ಬೃಂದಾವನದ ಸ್ಥಳದಲ್ಲಿಬೆಳ್ಳಿ, ಬಂಗಾರ ಇರಬಹುದು ಅಂತ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು. ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ. ತುಂಬಾ ಸಿದ್ಧತೆ ಮಾಡಿಕೊಂಡು ಮಾಡಿದ್ದಾರೆ. ಬೃಂದಾವನದ ಕಲ್ಲುಗಳನ್ನು ಪುಡಿಪುಡಿ ಮಾಡಿದ್ದಾರೆ. ನಾಲ್ಕುಅಡಿ ಆಳಕ್ಕೆ ಅಗೆದಿದ್ದಾರೆ.ಇದು ಮಾಧ್ವ ಸಮಾಜದ ಪಾಲಿಗೆ ಕರಾಳ ದಿನ. ನಾವೆಲ್ಲರೂ ಬಹಳ ದುಃಖದಲ್ಲಿದ್ದೇವೆ’ ಎಂದರು ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.