ಬೆಂಗಳೂರು: ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆಯುರಾಜ್ಯದ ಗಡಿಯೊಳಗೆ ಮರಾಠಿ ನಾಮಫಲಕ ಅಳವಡಿಸಿದ್ದ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಖಂಡಿಸಿದೆ.
‘ಮರಾಠಿ ನಾಮಫಲಕ ಅಳವಡಿಕೆಯಿಂದ ಗಡಿಭಾಗದ ಜನರಲ್ಲಿ ಮತ್ತೆ ಭಾಷಾ ವಿವಾದ ಕಿಡಿ ಹಚ್ಚಿದಂತಾಗಿದೆ. ನಿರಂತರ ಗಡಿಯಲ್ಲಿ ಕ್ಯಾತೆ ಮಾಡುವುದು ಮರಾಠಿಗರ ಪದ್ಧತಿ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಬೇಸರವ್ಯಕ್ತಪಡಿಸಿದ್ದಾರೆ.
‘ಈ ಕೃತ್ಯಕ್ಕೆ ಮಹಾರಾಷ್ಟ್ರ ಸರ್ಕಾರವು ಕುಮ್ಮಕ್ಕು ನೀಡಿದೆ. ಬೆಳಗಾವಿ ಜಿಲ್ಲೆಯ ಗಡಿ ಭಾಗವಾದ ಸಂಕೇಶ್ವರ ಸಮೀಪ ಗಡಹಿಂಗ್ಲಜ್ ರಸ್ತೆಯ ಸೇತುವೆಯ ಬಳಿ ಮರಾಠಿ ನಾಮಫಲಕ ಹಾಕಲಾಗಿತ್ತು. ಇದನ್ನು ಸ್ಥಳೀಯ ಕನ್ನಡ ಪರ ಸಂಘಟನೆಗಳು ಗಮನಿಸಿ, ಆಕ್ರೋಶ ವ್ಯಕ್ತಪಡಿಸಿದ್ದವು. ಇದರಿಂದಾಗಿ ಸಂಕೇಶ್ವರ ಪೊಲೀಸರು ರಾಜ್ಯದೊಳಗೆ ಇರುವ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಹಾಕಿರುವ ನಾಮಫಲಕವನ್ನು ತೆರವು ಮಾಡಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಹೇಳಿದ್ದಾರೆ.
‘ಅನ್ಯ ಭಾಷಿಕರು ಗಡಿಭಾಗದಲ್ಲಿ ಇಂತಹ ಕೃತ್ಯ ಎಸಗುವುದನ್ನು ತಡೆಯಲು ಸ್ಥಳೀಯ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ, ಸ್ಥಳೀಯ ಪೊಲೀಸ್ ಇಲಾಖೆ ಎಚ್ಚರದಿಂದ ಇರಬೇಕು. ಮಹಾರಾಷ್ಟ್ರ ಸರ್ಕಾರ ನಮ್ಮ ನೆಲದಲ್ಲಿ ಬಂದು, ನಾಮಫಲಕ ಹಾಕುವವರೆಗೆ ನಮ್ಮ ಅಧಿಕಾರಿಗಳು ಮೌನವಹಿಸಿದ್ದು ಸರಿಯಲ್ಲ. ಇಂತಹ ಪರಿಸ್ಥಿತಿ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.