ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆಯಂದು ಮಹಾರಥೋತ್ಸವವು ಭಾನುವಾರ ಅದ್ಧೂರಿಯಾಗಿ ಜರುಗಿತು.
ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ರಾಜ್ಯಗಳಿಂಧ ಮಂತ್ರಾಲಯ ಸುತ್ತಮುತ್ತಲಿನ ಗ್ರಾಮಸ್ಥರು ಕುಟುಂಬಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಾಯರ ದರ್ಶನ ಮಾಡಿದರು.
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ರಥದಲ್ಲಿ ಆಸೀನರಾಗಿ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಅನುಗ್ರಹ ಸಂದೇಶ ನೀಡಿದರು.
ರಥದಲ್ಲಿ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನಿಟ್ಟು ಮಹಾರಥೋತ್ಸವ ಎಳೆಯಲಾಯಿತು. ಮಠದ ಪ್ರಾಂಗಣದಿಂದ ಮುಖ್ಯರಸ್ತೆಯ ಪ್ರವೇಶ ಗೋಪುರದವರೆಗೂ ರಾಜಬೀದಿಯಲ್ಲಿ ರಥವು ಸಂಚರಿಸಿತು. ಶ್ರೀ ಸುಬುಧೇಂದ್ರ ತೀರ್ಥರು ಹೆಲಿಕಾಪ್ಟರ್ ಮೂಲಕ ರಥೋತ್ಸವದ ಮೇಲೆ ಪುಷ್ಪವೃಷ್ಟಿ ಮಾಡಿದ್ದು ವಿಶೇಷವಾಗಿತ್ತು.
ರಥೋತ್ಸವ ಆರಂಭವಾಗುವ ಪೂರ್ವ ರಾಯರ ಪೂರ್ವಾವತಾರ ಪ್ರಹ್ಲಾದ ಮಹಾರಾಜದ ಉತ್ಸವ ಮೂರ್ತಿಯನ್ನು ಮಠದಿಂದ ಸಂಸ್ಕೃತ ವಿದ್ಯಾಪೀಠದವರೆಗೂ ವಾಧ್ಯವೈಭವದ ಮೂಲಕ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಬರಲಾಯಿತು. ಮಠದ ಗರ್ಭಗುಡಿಯಲ್ಲಿ ವಸಂತೋತ್ಸವ ಜರುಗಿತು. ನಂತರ ರಥೋತ್ಸವದತ್ತ ಪ್ರಹ್ಲಾದರ ಮೂರ್ತಿ ತರಲಾಗಿತ್ತು.
ನೆರೆದಿದ್ದ ಸಾವಿರಾರು ಭಕ್ತರು ರಾಯರ ಪರ ಘೋಷಣೆಗಳನ್ನು ಮೊಳಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.