ಬೆಳಗಾವಿ: ಜಿಲ್ಲೆಯ ಅಥಣಿ, ಗೋಕಾಕ ಹಾಗೂ ಕಾಗವಾಡ ಕ್ಷೇತ್ರಗಳಿಂದ ಸೋಮವಾರ (ನ.18) ಪ್ರಮುಖ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.
ಗೋಕಾಕದಿಂದ ಬಿಜೆಪಿ ಅಭ್ಯರ್ಥಿಯಾಗಿ ರಮೇಶ ಜಾರಕಿಹೊಳಿ, ಕಾಂಗ್ರೆಸ್ನಿಂದ ಲಖನ್ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಬಂಡಾಯ ಎದ್ದಿರುವ ಬಿಜೆಪಿ ಮುಖಂಡ ಅಶೋಕ ಪೂಜಾರಿ ಪಕ್ಷೇತರರಾಗಿ ಸ್ಪರ್ಧಿಸುವರೋ, ಜೆಡಿಎಸ್ನಿಂದಲೋ ಎನ್ನುವ ಕುತೂಹಲವೂ ಇದೆ. ಸಹೋದರರ ಸವಾಲು ಇಲ್ಲಿನ ವಿಶೇಷವಾಗಿದೆ. ರಮೇಶ ಪರವಾಗಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಲಖನ್ ಪರವಾಗಿ ಶಾಸಕ ಸತೀಶ ಜಾರಕಿಹೊಳಿ ಮೊದಲಾದ ಕಾಂಗ್ರೆಸ್ ನಾಯಕರು ಪಾಲ್ಗೊಳ್ಳಲಿದ್ದಾರೆ. ಎರಡೂ ಕಡೆಯವರು ಮೆರವಣಿಗೆ ನಡೆಸುವ ಮೂಲಕ ‘ಶಕ್ತಿ ಪ್ರದರ್ಶನ’ಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾಗವಾಡದಲ್ಲಿ ಕಾಂಗ್ರೆಸ್ನಿಂದ ಭರಮಗೌಡ (ರಾಜು) ಕಾಗೆ, ಬಿಜೆಪಿಯಿಂದ ಶ್ರೀಮಂತ ಪಾಟೀಲ ಕಣಕ್ಕಿಳಿಯಲಿದ್ದಾರೆ.
ಅಥಣಿಯಲ್ಲಿ ಕಾಂಗ್ರೆಸ್ನಿಂದ ಗಜಾನನ ಮಂಗಸೂಳಿ ಮತ್ತು ಬಿಜೆಪಿಯಿಂದ ಮಹೇಶ ಕುಮಠಳ್ಳಿ ನಾಮಪತ್ರ ಸಲ್ಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಯೊಂದಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮೊದಲಾದವರು ಪಾಲ್ಗೊಳ್ಳಿದ್ದಾರೆ. ಅಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.