ಮಂಗಳೂರು: ಇಲ್ಲಿನ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ಆರೋಪಿ ಕೆಂಜಾರು ಬಳಿ ವಾಣಿಜ್ಯ ಸಂಕೀರ್ಣದಲ್ಲಿ ಬಾಂಬ್ ಇರಿಸಲು ಯತ್ನಿಸಿದ್ದ ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಸೋಮವಾರ ಬೆಳಿಗ್ಗೆ ನಗರ ಸಾರಿಗೆ ಬಸ್ ನಲ್ಲಿ ಬಂದಿಳಿದ ಶಂಕಿತ ವ್ಯಕ್ತಿ, ಕೆಂಜಾರುವಿನಲ್ಲಿ ವಾಣಿಜ್ಯ ಸಂಕೀರ್ಣವೊಂದರಲ್ಲಿರುವ ರಾಯಲ್ ಮೆನ್ಸ್ ಸಲೂನ್ ಎಂಬ ಕ್ಷೌರದಂಗಡಿಗೆ ಹೋಗಿ ಮುಖ ಕ್ಷೌರ ಮಾಡಿಸಿಕೊಂಡಿದ್ದ. ಎರಡು ಬ್ಯಾಗ್ ತಂದಿದ್ದ ಆರೋಪಿ ಒಂದನ್ನು ಅಲ್ಲೇ ಇರಿಸಿ ಹೋಗಲು ಯತ್ನಿಸಿದ್ದ. ಈ ಸಂಬಂಧ ಪೊಲೀಸರು ಕ್ಷೌರದಂಗಡಿ ಮಾಲೀಕ ಸಲ್ಮಾನ್ ಅವರನ್ನು ವಿಚಾರಣೆ ನಡೆಸಿದ್ದಾರೆ.
'ಆ ವ್ಯಕ್ತಿ ಟೊಪ್ಪಿ ಧರಿಸಿಕೊಂಡು, ತಲೆ ಬಗ್ಗಿಸಿಯೇ ಮಾತನಾಡುತ್ತಿದ್ದ. ಮುಖ ನೋಡಲು ಸಾಧ್ಯವಾಗಲಿಲ್ಲ. ಒಂದು ಬ್ಯಾಗ್ ಸಲೂನ್ ನಲ್ಲಿ ಇಟ್ಟು ಹೋಗುತ್ತೇನೆ ಎಂದ. ನಾನು ಅದಕ್ಕೆ ಒಪ್ಪಲಿಲ್ಲ. ವಾಣಿಜ್ಯ ಸಂಕೀರ್ಣದ ಭದ್ರತಾ ಸಿಬ್ಬಂದಿ ಕೂಡ ನಿರಾಕರಿಸಿದರು' ಎಂದು ಸಲ್ಮಾನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.